ಬಳ್ಳಾರಿ: ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆ ಪ್ರಕರಣಗಳ ತನಿಖೆಯನ್ನು ಸಿಬಿಐ ಅರ್ಧಕ್ಕೆ ಬಿಟ್ಟು ಕೈತೊಳೆದುಕೊಂಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಗಳ ಮೂಲ ಹುಡುಕಿದ್ದರೆ ಸಿಬಿಐಗೆ ತನಿಖೆ ಪೂರ್ಣಗೊಳಿಸಲು ಸಾಧ್ಯವಿತ್ತು. 57 ಕಂಪೆನಿಗಳು ಅವ್ಯವಹಾರದಲ್ಲಿ ಪಾಲ್ಗೊಂಡಿವೆ ಎಂದರು.
'ಇದು ಸಿಬಿಐನ ಅಸಮರ್ಥತೆಯನ್ನು ತೋರುತ್ತದೆ ಎಂಬುದಕ್ಕಿಂತಲೂ ರಾಜ್ಯ ಸರ್ಕಾರಕ್ಕೆ ಆಗಿರುವ ನಷ್ಟ ದೊಡ್ಡದು. ಹೀಗಾಗಿ ಈ ಸಂಗತಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಗೃಹ ಸಚಿವರ ಅಧ್ಯಕ್ಷತೆಯಲ್ಲಿರುವ ಸಚಿವ ಸಂಪುಟ ಉಪಸಮಿತಿ ಈಗಾಗಲೆ ಕೆಲವು ತೀರ್ಮಾನ ಕೈಗೊಂಡಿದೆ ಎಂದರು.
ಐಟಿ, ಇಡಿ, ಆರ್ಬಿಐ, ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೌರಿ ಲಂಕೇಶ ಹತ್ಯೆಗೆ ಸಂಬಂಧಿಸಿ ಶಂಕಿತರನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಅವರು ಎಡಪಂಥೀಯರೋ, ಬಲಪಂಥೀಯರೋ ಎಂಬುದನ್ನು ಈಗಲೇ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.