ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕುಸಿತ

Last Updated 20 ನವೆಂಬರ್ 2017, 10:11 IST
ಅಕ್ಷರ ಗಾತ್ರ

ಕನಕಪುರ: ಕನ್ನಡ ನಾಡಿನ ಬಗ್ಗೆ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಗ್ಗೆ ಕನಿಷ್ಠ ತಿಳಿವಳಿಕೆಯಿಲ್ಲದವರು ಇಂದು ಬಿ.ಬಿ.ಎಂ.ಪಿ. ಸದಸ್ಯರಾಗಿದ್ದಾರೆ ಎಂದು ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ದೇವರಾಜ್‌ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ನಗರದ ರೋಟರಿ ಭವನದಲ್ಲಿ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಆಯೋಜನೆ ಮಾಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ, ಕನ್ನಡ ನಾಡು ಎಲ್ಲಾ ಭಾಷೆಯ, ಎಲ್ಲಾ ದೇಶದ ಜನತೆಗೆ ಅವಕಾಶ ಕೊಟ್ಟು ಬದುಕುವ ಅನುಕೂಲ ಕಲ್ಪಿಸಿಕೊಟ್ಟಿದೆ. ಆದರೆ ಈ ಮಣ್ಣಿನ ಋಣದಲ್ಲಿ ಬದುಕುತ್ತಿರುವವರು ಕನ್ನಡ ತಾಯಿಗೆ ಋಣಿ ಯಾಗುತ್ತಿಲ್ಲ, ಕನ್ನಡ ಭಾಷೆಯನ್ನು ಅವಹೇಳನ ಮಾಡುತ್ತಿದ್ದಾರೆ. ಬೆಂಗಳೂರು ನಗರದ ಬಿ.ಬಿ.ಎಂ.ಪಿ.ಯಲ್ಲಿ ಕನ್ನಡ ಭಾಷಿಕರು ಅತ್ಯಂತ ವಿರಳವಾಗಿದ್ದಾರೆ ಎಂದರು.

ಯಾವ ವಾರ್ಡುಗಳಲ್ಲಿ ಯಾವ ಭಾಷೆಯ ಜನ ಹೆಚ್ಚಾಗಿರುವವರೋ ಆ ಭಾಷಿಕರಿಗೆ ಅಲ್ಲಿ ಮಣೆ ಹಾಕಲಾಗುತ್ತಿದೆ, ಇದೇ ಸಂಸ್ಕೃತಿ ಮುಂದುವರಿದರೆ ಮುಂದೊಂದು ದಿನ ಕನ್ನಡಿಗರೇ ಬೆಂಗಳೂರಿನಲ್ಲಿ ಹೊರಗಿನವರು, ಅಲ್ಪಸಂಖ್ಯಾತರಾಗಿ ಹೊರದಬ್ಬುವ ಸಂದರ್ಭ ಒದಗಿದರೂ ಅಚ್ಚರಿಯಿಲ್ಲವೆಂದು ಎಚ್ಚರಿಸಿದರು.

ಬೆಂಗಳೂರಿನಂತ ನಗರದಲ್ಲಿ ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್‌ ಮಾಡಿದೆ. ಇದರಿಂದ ದೇಶದ ಅನ್ನದಾತ, ಬಡವರಿಗೆ ಏನು ಲಾಭ, ಬೆಂಗಳೂರಿನಲ್ಲಿ ಕೂಲಿ ಮಾಡುವವರು ದಿನಕ್ಕೆ ₹500 ದುಡಿಯುತ್ತಾರೆ, ಯಾರು ಹಸಿವಿನಿಂದ ಮಲಗುವುದಿಲ್ಲ, ಆದರೆ ಗ್ರಾಮೀಣ ಪ್ರದೇಶದಲ್ಲಿ ಹೊಲಗಳಲ್ಲಿ ದುಡಿಯುವ ರೈತಕುಟುಂಬ ಅನಾನುಕೂಲದಿಂದ, ಶ್ರಮದ ಆಯಾಸದಿಂದ ಇಂದು ಹಸಿವಿನಿಂದ ಮಲಗಬೇಕಿದೆ ಎಂದರು.

ಎಲ್ಲರೂ ಒಟ್ಟಾಗಿ ಕನ್ನಡ ಭಾಷೆ, ನೆಲ, ಜಲಕ್ಕಾಗಿ ಒಗ್ಗಟ್ಟಿನ ಹೋರಾಟ ನಡೆಸೋಣ. ಕನ್ನಡಿಗರ ಪರವಾಗಿ ನೊಂದವರ ಕಣ್ಣೀರ ಒರೆಸೋಣ, ನಿಸ್ವಾರ್ಥ ಮನೋಭಾವದಿಂದ ಹೋರಾಟ ನಡೆಸುತ್ತಿರುವ ಸ್ವ.ಕರವೇ ಸಂಘಟನೆಗೆ ಎಲ್ಲರೂ ಕೈ ಜೋಡಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.

ಯುವ ಸಾಹಿತಿ ನಾಗಲೇಖ ಅವರು ಕನ್ನಡ ಭಾಷೆ ಮತ್ತು ಕನ್ನಡ ನಾಡಿನಲ್ಲಿ ಕನ್ನಡಿಗರ ಪರಿಸ್ಥಿತಿಯ ಬಗ್ಗೆ ವಿವರಿಸಿ, ‘ನಾವು ಎಲ್ಲರಿಗೂ ಮುಕ್ತವಾದ ಅವಕಾಶಗಳನ್ನು ಕೊಡುತ್ತಾ ಬಂದಿದ್ದೇವೆ. ನಮ್ಮತನ ಮತ್ತು ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಬೇಕೆಂದು ಕರೆ ನೀಡಿದರು.

ಪ್ರಶಸ್ತಿ:  ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ–2017ರ ರಾಜ್ಯ ಪ್ರಶಸ್ತಿಯಾಗಿ ರೈತಪರ ಕ್ಷೇತ್ರದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜುಗೆ ರೈತಚೇತನ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಮನಗರ ಸಾಂಸ್ಕೃತಿಕ ಸೌರಭ ಟ್ರಸ್ಟ್‌ ಅಧ್ಯಕ್ಷ ರಾ.ಬಿ.ನಾಗರಾಜು ಗಾಯನಸಿರಿ, ಯುವ ಜಾನಪದ ಕ್ಷೇತ್ರದಲ್ಲಿ ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಚಂದ್ರ ನಾಡಚೇತನ ಪ್ರಶಸ್ತಿ ನೀಡಲಾಯಿತು.

ಭರತನಾಟ್ಯ: ನಗರದ ಕೋಟೆ ಶ್ರೀ ವಿನಾಯಕ ನೃತ್ಯ ಶಾಲೆಯ ಮಕ್ಕಳು ಭರತನಾಟ್ಯದ ಎರಡು ಕಾರ್ಯಕ್ರಮ ನಡೆಸಿಕೊಟ್ಟು ನೆರೆದಿದ್ದ ಜನತೆಯನ್ನು ರಂಜಿಸಿದರು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ ಪುಸ್ತಕ ಮತ್ತು ಪರಿಕರ ಕೊಡಲಾಯಿತು.

ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಡಿ.ದೇವು, ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ಪೊಲೀಸ್‌ ಇಲಾಖೆಯ ಕೆ.ವಿ.ಕೃಷ್ಣ, ಸ್ವ.ಕರವೇ ಬಿ.ಟಿ.ಎಂ.ಲೇಔಟ್‌ ವಿಧಾನ ಸಭಾ ಅಧ್ಯಕ್ಷ ವಿನಯ್‌, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಭಾಸ್ಕರ್‌, ತಾಲ್ಲೂಕು ಅಧ್ಯಕ್ಷ ಅಂಗಡಿರಮೇಶ್‌, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಾವೇದ್‌, ಕಾರ್ಮಿಕ ಘಟಕದ ಅಧ್ಯಕ್ಷ ಅಸ್ಗರ್‌, ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿ, ತಾಲ್ಲೂಕು ಉಪಾಧ್ಯಕ್ಷ ಕುಮಾರ್‌, ಟೌನ್‌ ಅಧ್ಯಕ್ಷ ನಾಗರಾಜು, ಯುವ ಘಟಕದ ಅಧ್ಯಕ್ಷ ಸುರೇಶ್‌, ಪದಾಧಿಕಾರಿಗಳಾದ ಅನಿಲ್‌, ನಂಜುಂಡಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT