ಕನಕಪುರ: ಕನ್ನಡ ಭಾಷೆಯು ಜಗತ್ತಿನ ಅತ್ಯುತ್ತಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಭಾಷೆಯಾಗಿದೆ ಎಂದು ಡಾ.ವಿಜಯ್ ಕುಮಾರ್ ಹೇಳಿದರು.
ನಗರದ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಮತ್ತು ಪ್ರತಿಬಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆಯು 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆಯಾಗಿದೆ, 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಇಂಥ ಭಾಷೆಯನ್ನು ಅನ್ಯ ಭಾಷೆಗಳ ಮ್ಯಾಮೋಹದಿಂದ ನಿರ್ಲಕ್ಷಿಸಲ್ಪಡುವುದು ಸರಿಯಲ್ಲವೆಂದರು.
ಸರ್ಕಾರಿ ಶಾಲೆಗಳನ್ನು ಉಳಿಸಬೇಕೆನ್ನುವ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಮೊದಲು ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಕೆಲಸವನ್ನು ಮಾಡಬೇಕು, ಸರ್ಕಾರಿ ಸವಲತ್ತು ಪಡೆಯುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಡ್ಡಾಯವಾಗಿ ಸೇರಿಸಬೇಕೆಂಬ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಬ್ಯಾಂಕಿನ ಕಾರ್ಯದರ್ಶಿ ರಾಮಚಂದ್ರ ಮಾತನಾಡಿ, ‘ಅಖಿಲ ಭಾರತ 64ನೇ ಸಹಕಾರ ಸಪ್ತಾಹದಲ್ಲಿ ನಮ್ಮ ಬ್ಯಾಂಕು ರಾಜ್ಯಪ್ರಶಸ್ತಿಯನ್ನು ಪಡೆದಿದೆ, ಜಿಲ್ಲಾ ಮಟ್ಟದ ಪತ್ತಿನ ಸಹಕಾರ ಮಹಾಮಂಡಳಿ ಈ ಸ್ಟಾಪಿಂಗನಲ್ಲಿ ಅತ್ಯುತ್ತಮ ವ್ಯವಹಾರ ನಿರ್ವಹಣೆಗೆ ಜಿಲ್ಲಾ ಪ್ರಶಸ್ತಿಯನ್ನು ಪಡೆದಿದೆ. ಜಿಲ್ಲಾ ಬ್ಯಾಂಕುಗಳಲ್ಲಿ ಅತ್ಯುತ್ತಮ ಸಹಕಾರ ಸಂಘವೆಂಬ ಪ್ರಶಸ್ತಿಯನ್ನು ಪಡೆದಿರುವುದಾಗಿ ತಿಳಿಸಿದರು.
2015–-16, 2016-–17ನೇ ಸಾಲಿನ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಡಾ.ಟಿ.ಎನ್.ವಿಜಯಕುಮಾರ್, ಆಕಾಶವಾಣಿ ಕಲಾವಿದ ಚಿಕ್ಕಮರೀಗೌಡ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಮಹಾಗಣಪತಿ ಆಟ್ಸ್ ಅಂಡ್ ಕಲ್ಚರಲ್ ಫೌಂಡೇಷನ್ ಅವರಿಂದ ‘ಕನ್ನಡಾಂಬೆ ಚಾಮುಂಡೇಶ್ವರಿ’ ಎಂಬ ಯಕ್ಷಗಾನ ಪ್ರದರ್ಶನವಾಯಿತು.
ಬ್ಯಾಂಕಿನ ಅಧ್ಯಕ್ಷ ಜೋಸೆಫ್ ಗೋನ್ಸಾಲ್ವಿಸ್, ಉಪಾದ್ಯಕ್ಷ ವಿ.ಎಲ್. ಮಹದೇವಸ್ವಾಮಿ, ನಿರ್ದೇಶಕ ಡಾ. ಟಿ.ಎನ್.ವಿಜಯಕುಮಾರ್, ರಾಮಚಂದ್ರು, ಎಂ.ಎಲ್. ಶಿವಕುಮಾರ್, ತಿಮ್ಮೇಗೌಡ, ಪಿ.ರಾಮಚಂದ್ರ ಉಪಾದ್ಯ, ಡಿ. ವಿಜಯ್ಕುಮಾರ್, ಚೂಡಾಮಣಿ, ಎಸ್.ಎನ್. ರಜನಿ, ರೋಹಿಣಿ ಪ್ರಿಯ, ಶಾಖೆಯ ಮುಖ್ಯಸ್ಥ ರವೀಂದ್ರ, ವ್ಯವಸ್ಥಾಪಕ ಹನುಮಾನ್ಸಿಂಗ್, ಕನಕಪುರ ಮತ್ತು ಹಾರೋಹಳ್ಳಿ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.