ಉಡುಪಿ: ಅಂಗವಿಕಲರಿಗೆ ಸ್ವ ಉದ್ಯೋಗಕ್ಕಾಗಿ ನೀಡುತ್ತಿರುವ ಆಧಾರ ಗೂಡಾಂಗಡಿ ಸಹಾಯಧನ ಮೊತ್ತವನ್ನು ₹1 ಲಕ್ಷಕ್ಕೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ವಿವಿದ್ದೋದ್ದೇಶ ಪುನರ್ವಸತಿ ಹಾಗೂ ಗ್ರಾಮೀಣ ಪುರ್ನಾವಸತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಅಂಗವಿಕಲರಿಗೆ ಸರ್ಕಾರ ಬಸ್ ಪಾಸ್ ನೀಡುತ್ತಿದ್ದು. ಅದರ ಪ್ರಯಾಣ ಮಿತಿಯನ್ನು ಏರಿಸಬೇಕು. ಅವಶ್ಯಕತೆ ಇರುವಷ್ಟು ದೂರಕ್ಕೆ ಅನುಮತಿಯನ್ನು ನೀಡಬೇಕು. ಪಾಸ್ ಸೌಲಭ್ಯ ಪಡೆಯಲು ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇದ್ದು, ಹತ್ತಿರದ ಕೆಎಸ್ಆರ್ಟಿಸಿ ಕಚೇರಿಗಳಲ್ಲಿ ನೀಡಬೇಕು. ಖಾಸಗಿ ಬಸ್ನಲ್ಲಿ ಸಹ ಶೇ50ರಷ್ಟು ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು
ಎಂಡೋ ಸಂತ್ರಸ್ತರು ಹಾಗೂ ಅಂಕವಿಕಲರ ಪುರ್ನಾವಸತಿಗಾಗಿ ಕಾರ್ಯನಿರ್ವಹಿಸುವ ಎಂಆರ್ಡಬ್ಲ್ಯೂ ಹಾಗೂ ವಿಆರ್ಡಬ್ಲ್ಯೂ ಕಾರ್ಯಕರ್ತರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಅವರಿಗೆ ನೀಡುವ ಗೌರವಧನವನ್ನು ₹8,000 ದಿಂದ ₹12,000 ಹೆಚ್ಚಳ ಮಾಡಬೇಕು. ಸರ್ಕಾರ ನೀಡುತ್ತಿರು ಮಾಸಿಕ ಪೋಷಣೆ ಲಭ್ಯತೆಯನ್ನು ₹500 ನಿಂದ ₹3,000 ಹಾಗೂ 1,200 ರಿಂದ 5,000ಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರದ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಂಡೋ ಸಂತ್ರಸ್ತರಿಗೆ ಹಾಗೂ ಅಂಕವಿಕಲರಿಗೆ ಉಡುಪಿಯಲ್ಲಿ ಬಸ್ಪಾಸ್ ನೀಡುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ್ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಪೂಜಾರಿ, ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಮಂಜುಳಾ ಕಾರ್ಕಳ, ಕೃಷ್ಣ ಬ್ರಹ್ಮಾವರ, ರಾಧಕೃಷ್ಣ ಬೈಂದೂರು, ಬಾಬು ದೇವಾಡಿಗ ಇದ್ದರು.
* *
ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರದ ನಿರ್ಮಾಣ ಮಾಡಲು ಈಗಾಗಲೇ ಕುಂದಾಪುರ ತಾಲ್ಲೂಕಿನಲ್ಲಿ 5ಎಕರೆ ಜಾಗ ಗುರುತಿಸಲಾಗಿದೆ. ಅನುದಾನ ಬಿಡುಗಡೆ ಆದ ಕೂಡಲೇ ಕಟ್ಟಡದ ಕಾಮಗಾರಿ ಆರಂಭಿಸಲಾಗುತ್ತದೆ.
ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.