ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವೈಕಲ್ಯ ಮೆಟ್ಟಿ ನಿಂತ ಸಹೋದರರು

Last Updated 3 ಡಿಸೆಂಬರ್ 2017, 9:43 IST
ಅಕ್ಷರ ಗಾತ್ರ

ಔರಾದ್: ಇಲ್ಲಿಯ ಕನಕ ಗಲ್ಲಿಯ ಸಹೋದರರಿಬ್ಬರು ಅಂಗವಿಕಲತೆ ಮತ್ತು ಬಡತನವನ್ನು ಮೆಟ್ಟಿ ನಿಂತು ಸಮಾಜಕ್ಕೆ ಮಾದರಿಯಾಗಿದ್ದಾರೆ. ಕೂಲಿ ಕಾರ್ಮಿಕ ಶಾಮರಾವ ರಾವಣಗಾವೆ ಅವರ ಪುತ್ರರಿಬ್ಬರು ಹುಟ್ಟು ಅಂಗವಿಕಲರು. ಆದರೆ ಅವರು ಕುಟುಂಬಕ್ಕಾಗಲಿ, ಸಮಾಜಕ್ಕಾಗಲಿ ಭಾರವಾಗದೆ ಜೀವನ ಸಾಗಿಸುತ್ತಿದ್ದಾರೆ.

ಅಣ್ಣ ಪಂಢರಿ ರಾವಣಗಾವೆ ಜನಿಸಿದಾಗಿನಿಂದ ಎರಡೂ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡವರು. ತಮ್ಮ ಮಾರುತಿ ರಾವಣಗಾವೆ ಹುಟ್ಟುತ್ತಲೇ ಎರಡೂ ಕಣ್ಣಿನಿಂದ ಕುರುಡರು. ಆದರೂ ಪೋಷಕರು ಬಡತನದ ನಡುವೆ ಇಬ್ಬರಿಗೂ ಓದಿಸಿದ್ದಾರೆ. ಪಂಢರಿ 8ನೇ ತರಗತಿ ವರೆಗೆ ಕಲಿತು ಈಗ ತ್ರಿಚಕ್ರ ಸೈಕಲ್ ಮೇಲೆ ಐಸ್‌ಕ್ರಿಮ್ ಮತ್ತು ಬಿಸ್ಕೆಟ್‌ ಮಾರಿ ತನ್ನ ಖರ್ಚು ತಾವೇ ನೋಡಿಕೊಳ್ಳುತ್ತಾರೆ. ‘ನಾನು ಮದುವೆ ಮಡಿಕೊಂಡು ಬೇರೆಯವರಿಗೆ ಕಷ್ಟ ಕೊಡಲು ಬಯಸುವುದಿಲ್ಲ. ಹೀಗಾಗಿ ತಂದೆ–ತಾಯಿ ಜೊತೆ ಬದುಕುವುದರಲ್ಲೇ ನನಗೆ ಸಂತೋಷವಿದೆ’ ಎನ್ನುತ್ತಾರೆ ಪಂಢರಿ.

ಆದರೆ ತಮ್ಮ ಮಾರುತಿ ಹುಟ್ಟು ಕುರುಡನಾದರೂ ಪಿಯುಸಿ ವರೆಗೆ ಓದಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಗೀತ ವಿಶಾರದ ಪರೀಕ್ಷೆ ಪಾಸು ಮಾಡಿದ್ದಾರೆ. ಹಾಡುವುದು, ತಬಲಾ ಮತ್ತು ಹಾರ್ಮೋನಿಯಂ ನುಡಿಸುವುದರಲ್ಲಿ ಪರಿಣತಿ ಪಡೆದಿದ್ದಾರೆ. ಕಸ್ತೂರಬಾ ಶಾಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಇವರ ಮದುವೆ ಆಗಿದ್ದು, ಎರಡು ಆರೋಗ್ಯವಂತ ಮಕ್ಕಳು ಇದ್ದಾರೆ. ಸರ್ಕಾರ ಕೊಡುವ ₹ 1,200 ಮಾಸಾಶನ ಹಾಗೂ ಶಿಕ್ಷಕ ವೃತ್ತಿಯಿಂದ ಬರುವ ₹ 4,000 ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ. ‘ಕುರುಡ ಎಂಬ ಕೀಳರಿಮೆ ನನಗಿಲ್ಲ. ಜನ ನನ್ನ ಮನೆ ತನಕ ಬಂದು ಸಂಗೀತ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಗೌರವ ಕೊಡುತ್ತಾರೆ. ಇದೇ ನನ್ನ ಬದುಕಿಗೆ ಪ್ರೇರಣೆ ಆಗುತ್ತಿದೆ’ ಎಂದು ಮಾರುತಿ ರಾವಣಗಾವೆ ಹೇಳುತ್ತಾರೆ.

‘ನನಗೆ ಹುಟ್ಟಿದ ನಾಲ್ಕು ಮಕ್ಕಳ ಪೈಕಿ ಮಾರುತಿ ಮತ್ತು ಪಂಢರಿ ಇಬ್ಬರೂ ಹುಟ್ಟು ಅಂಗವಿಕಲರು. ಇಂತಹ ಮಕ್ಕಳು ಇಟ್ಟುಕೊಂಡು ಏನು ಮಾಡುವುದು ಎಂದು ಜನ ಆಡಬಾರದ ಮಾತು ಆಡಿದರು. ಆದರೆ, ಅಂತಹದ್ದಕ್ಕೆ ಕಿವಿಗೊಡದೆ ಹಗಲಿರುಳು ಕಷ್ಟಪಟ್ಟು ಮಕ್ಕಳನ್ನು ದೊಡ್ಡವರಾಗಿ ಮಾಡಿದ್ದೇವೆ. ಈಗ ಅವರು ಕಷ್ಟಪಟ್ಟು ದುಡಿಯುತ್ತಿದ್ದಾರೆ. ಸರ್ಕಾರ ಒಂದಿಷ್ಟು ಅವರ ನೆರವಿಗೆ ಬಂದರೆ ನಮ್ಮಂತಹ ಹೆತ್ತ ಕರುಳಿಗೂ ಆನಂದವಾಗುತ್ತದೆ’ ಎಂದು ತಾಯಿ ತೇಜಾಬಾಯಿ ಕಷ್ಟದ ದಿನಗಳು ನೆನಪಿಸಿ ಕಣ್ಣೀರು ಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT