ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕೆಂಗಟ್ಟೆ ಗ್ರಾಮದಲ್ಲಿ ಶನಿವಾರ ಆನೆ ದಾಳಿಯಿಂದ ರೈತ ಈಶ್ವರ ನಾಯ್ಕ (60) ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ ರಾಗಿ ಹೊಲಕ್ಕೆ ನೀರು ಕಟ್ಟುವಾಗ ಏಕಾಏಕಿ ದಾಳಿ ಮಾಡಿದ ಆನೆ ದಂತದಿಂದ ಬೆನ್ನಿಗೆ ತಿವಿದಿದೆ. ಅವರನ್ನು ಶಿವಮೊಗ್ಗದ ಮೆಟ್ರೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆ ಹಾಗೂ ಬಸವಾಪಟ್ಟಣ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಶನಿವಾರ ಹೊನ್ನಾಳಿ ಗಡಿ ಪ್ರವೇಶಿಸಿವೆ. ಸದ್ಯ ಗಡಿಕಟ್ಟೆ ಅರಣ್ಯ ಪ್ರದೇಶದಲ್ಲಿ ಒಂದು ಆನೆ ಕಾಣಿಸಿಕೊಂಡಿದೆ ಎಂದು ವಲಯ ಅರಣ್ಯಾಧಿಕಾರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಾಲ್ಲೂಕಿನ ಗಡಿಭಾಗದ ನಾಗರಿಕರು ಹಾಗೂ ಕಾಡಂಚಿನಲ್ಲಿರುವ ರೈತರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಮನವಿ ಮಾಡಿದ್ದಾರೆ.