ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಗೆ ತೋಟದ ಬೆಳೆ ಆಸರೆ’

Last Updated 23 ಡಿಸೆಂಬರ್ 2017, 8:36 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಕಳೆದ ನಾಲ್ಕು ವರ್ಷಗಳಿಂದ ಮಳೆ ಇಲ್ಲದೇ ಜಿಲ್ಲೆ ಬರಗಾಲ ಪೀಡಿತವಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳಲ್ಲಿ ಚೇತರಿಕೆ ಕಂಡಿದೆ. ತೋಟಗಾರಿಕೆ ಕೂಡ ಅಭಿವೃದ್ದಿ ಹಾದಿಯಲ್ಲಿ ಸಾಗಿರುವುದು ಸಂತಸದ ಸಂಗತಿ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರು ಹೇಳಿದರು.

ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚೆಗೆ ಕೃಷಿ ಕ್ಷೇತ್ರ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ. ಒಕ್ಕಲುತನ ಮಾಡುವತ್ತ ಯುವಕರು ಉತ್ಸಾಹ ತೋರುತ್ತಿಲ್ಲ. ಬದಲಾಗಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಅದು ಕಳವಳಕಾರಿ ವಿಷಯವಾಗಿದೆ ಎಂದರು.

ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಆರಂಭವಾದ ನಂತರ ಹೊಸ ಹೊಸ ಸಂಶೋಧನೆ ಕೈಗೊಂಡು ನೂತನ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳುತ್ತಿದ್ದಾರೆ. ಸ್ವಲ್ಪವೇ ಜಮೀನಿನಲ್ಲಿ ಅಧಿಕ ಪ್ರಮಾಣದ ಬೆಳೆ ತೆಗೆಯುವ ಮೂಲಕ ರೈತರಿಗೆ ಆಸರೆಯಾಗಿದ್ದಾರೆ. ಜೊತೆಗೆ ಅವರ ಆರ್ಥಿಕ ಸ್ಥಿತಿಯೂ ಸುಧಾರಣೆಗೊಳ್ಳುತ್ತಿದೆ’ ಎಂದರು.

‘ತೋಟಗಾರಿಕೆ ಕೌಶಲ್ಯ ಅಭಿವೃದ್ದಿ ತರಬೇತಿಗಳು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ನಡೆಯಬೇಕಾಗಿದೆ.ಅದರಲ್ಲೂ ಯುವ ಜನಾಂಗವನ್ನು ಕೃಷಿಯತ್ತ, ತೋಟಗಾರಿಕೆಯತ್ತ ಚಿತ್ತ ಹರಿಸಲು ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಶೇಷ ತರಬೇತಿಗಳನ್ನು ಆಯೋಜಿಸಬೇಕಿದೆ. ಕ್ಷೇತ್ರಗಳಿಗೆ ಭೇಟಿ ನೀಡಿ ರೈತರು ಬೆಳೆದ ಬೆಳೆಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿ ಹೆಚ್ಚಿನ ಇಳುವರಿ ಬರುವಂತೆ ಮಾಡಬೇಕಿದೆ’ ಎಂದರು.

‘ತೋಟಗಾರಿಕೆ ವಿಶ್ವವಿದ್ಯಾಲಯಲ್ಲಿ ಅಭಿವೃದ್ಧಿಪಡಿಸಿದ ಫಲಪುಷ್ಪ, ತರಕಾರಿ ಬೆಳೆಗಳನ್ನು ರೈತರಿಗೆ ಪರಿಚಯಿಸುವ ಜೊತೆಗೆ ಅವರು ಜಮೀನಿನಲ್ಲಿ ಬೆಳೆಯುವಂತೆ ಮಾಡಬೇಕಿದೆ. ಬೇರೆ ದೇಶಗಳಿಂದ ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳುವ ಫಲ,ಪುಷ್ಪ ಹಾಗೂ ತರಕಾರಿ ಇಲ್ಲಿಯೇ ಬೆಳೆಯುವಂತೆ ಪೂರಕ ವಾತಾವರಣ ಸೃಷ್ಟಿಸಿ ರೈತರು ಆರ್ಥಿಕವಾಗಿ ಸದೃಢರಾಗಲು ನೆರವಾಗುವಂತೆ’ ವಿಜ್ಞಾನಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ ಮಾತನಾಡಿ, ‘ಹಿಂದಿನ ಕೃಷಿಗೂ ಈಗಿನ ಕೃಷಿ ಪದ್ಧತಿಗೂ ಬಹಳ ವ್ಯತ್ಯಾಸವಿದೆ. ಹಿಂದೆ ಹೇರಳವಾಗಿ ಜವಾರಿ ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಆರ್ಥಿಕವಾಗಿ ರೈತರು ಅಭಿವೃದ್ದಿಯಾಗಿರಲಿಲ್ಲ. ಇಂದು ತುಂಡು ಜಮೀನಿನಲ್ಲಿಯೇ ಹೊಸ ಹೊಸ ಮಾದರಿಯ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಹನಿ ನೀರಾವರಿ ಬಳಸಿ ಕಡಿಮೆ ನೀರನ್ನು ಉಪಯೋಗಿಸಿ ಹೆಚ್ಚು ಬೆಳೆ ತೆಗೆಯುವಂತ ಕಾಲ ಇದಾಗಿದೆ. ಯುವಕರು ಕೃಷಿ ಚಟು ವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸ್ವಾವಲಂಬಿಗಳಾಗಿ ಬದುಕಬೇಕು’ ಎಂದರು.

ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಹೊರತರಲಾದ ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿ ಡಾ.ಡಿ.ಎಲ್.ಮಹೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತೋಟಗಾರಿಕೆ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ಪೂರ್ವದಲ್ಲಿ ವಿವಿಧ ತೋಟಗಾರಿಕೆ ಬೆಳೆ, ಹಣ್ಣು, ತರಕಾರಿ, ಕೃಷಿ ಸಾಮಗ್ರಿಗಳ ನೂತನ ಕೃಷಿ ಯಂತ್ರಗಳ ಹಾಗೂ ಔಷಧ ಮಳಿಗೆಗಳನ್ನು ಮತ್ತು ವಾರ್ತಾ ಇಲಾಖೆಯ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಲಾಯಿತು.

ಬಾರದ ಸಿ.ಎಂ, ಸಚಿವರು.. ಬಣಗುಟ್ಟಿದ ಮೇಳ

ತೋಟಗಾರಿಕೆ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಸಂಘಟಕರು ಹೇಳಿದ್ದರೂ ಸಿ.ಎಂ ಬರಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕೃಷಿ ಸಚಿವ ಕೃಷ್ಣ ಬೈರೇಗೌಡ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮೇಳದತ್ತ ತಲೆ ಹಾಕಲಿಲ್ಲ.

ಇದರಿಂದ ಮೊದಲ ದಿನವೇ ಮೇಳಕ್ಕೆ ಮಂಕು ಕವಿಯಿತು. ಉದ್ಘಾಟನಾ ಸಮಾರಂಭ ಕಳೆಗುಂದಿತು. ಮೇಳ ಜನರಿಲ್ಲದೇ ಬಣಗುಟ್ಟಿತು. ಜನರ ನಿರೀಕ್ಷೆಯಲ್ಲಿ ಕಾದು ಕುಳಿತು ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಆರಂಭಿಸಲಾಯಿತು. ಸಭಾಂಗಣದಲ್ಲಿ ಖಾಲಿ ಕುರ್ಚಿಗಳನ್ನು ಕಾಣಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT