ಪುತ್ತೂರು: ‘ಮಹದಾಯಿ ವಿಚಾರದಲ್ಲಿ ಸಿದ್ಧರಿಲ್ಲದವರನ್ನು ಇಂದು ಸಿದ್ಧಗೊಳಿಸುವ ಕೆಲಸ ಆಗಿದೆ. ಇದು ದೊಡ್ಡ ಪರಿವರ್ತನೆ. ಮನೋಹರ್ ಪರಿಕ್ಕರ್ ಅವರ ಸೂತ್ರವನ್ನು ಮಹಾದಾಯಿ ಹೋರಾಟಗಾರರು ಕೂಡ ಒಪ್ಪಿದ್ದಾರೆ. ಹೀಗಿದ್ದರೂ ಇದೇ 27ರಂದು ಬಂದ್ಗೆ ಕರೆ ಕೊಟ್ಟಿರುವುದು ಏಕೆಂದು ಗೊತ್ತಿಲ್ಲ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
‘ಮಹಾದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಸಂಧಾನ ಮಾತುಕತೆ ನಡೆಸಿ ಎಂದು ಸಚಿವರಾದ ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್ ಅವರಂಥವರೇ ಹಿಂದೆ ಹೇಳಿದ್ದರು. ಈಗ ಬಿ.ಎಸ್. ಯಡಿಯೂರಪ್ಪ ಅದೇ ಕೆಲಸ ಮಾಡಿದರೆ ಟೀಕಿಸುತ್ತಾರೆ.
ರಾಜಕಾರಣ ಮತ್ತೆ ಮಾಡೋಣ. ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳಿದೆ. ಈಗ ಬೇಸಿಗೆ ಆರಂಭಗೊಂಡಿರುವ ಕಾರಣ ನೀರಿನ ಸಮಸ್ಯೆ ಬಗೆಹರಿಯಬೇಕಾದ ಅಗತ್ಯ ಇರುವ ಕಾರಣ ಬಿಜೆಪಿ ಪ್ರಯತ್ನಿಸಿದೆ’ ಎಂದು ಅವರು ಶನಿವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.