ಶಹಾಪುರ: ನಗರಸಭೆಯ ಎದುರು ಇರುವ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕಟ್ಟಡ ನಿರ್ಮಿಸುವ ಸಲುವಾಗಿ ಜಾಗವನ್ನು ನಗರಸಭೆ ಸಿಬ್ಬಂದಿ ತಿಂಗಳ ಹಿಂದೆ ಸ್ವಚ್ಛಗೊಳಿಸಿದ್ದಾರೆ. ಕಾಮಗಾರಿ ಮಾತ್ರ ಆರಂಭವಾಗಿಲ್ಲ.
ಈಗಾಗಲೇ ಕಟ್ಟಡ ಕಾಮಗಾರಿ ಸಲುವಾಗಿ ₹12ಲಕ್ಷ ಹಣವನ್ನು ಭೂ ಸೇನಾ ನಿಗಮಕ್ಕೆ ನೀಡಲಾಗಿದೆ. ಇನ್ನೆರಡು ದಿನದಲ್ಲಿ ಕೆಲಸ ನಡೆಯಲಿದೆ ಎಂದು ಪೌರಾಯುಕ್ತ ರಮೇಶ ನಾಯಕ ಸಮಜಾಯಿಸಿ ನೀಡಿದ್ದಾರೆ.
ಹೊಸ ವರ್ಷದಂದು ಕ್ಯಾಂಟೀನ್ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ತಿಳಿಸಿದ್ದರು. ತಾಂತ್ರಿಕ ಕಾರಣದಿಂದ ಅದು ಮುಂದೆ ಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.
ಸದ್ಯ ಕ್ಯಾಂಟೀನ್ ನಿರ್ಮಿಸಲು ಜಾಗವನ್ನು ಮಾತ್ರ ಸ್ವಚ್ಛಗೊಳಿಸಿದ್ದಾರೆ. ಆದರೆ, ಅದರ ಸುತ್ತಮುತ್ತಲಿನ ಜಾಗವನ್ನು ತೆರವುಗೊಳಿಸಿಲ್ಲ. ಕ್ಯಾಂಟೀನ್ ಜಾಗಕ್ಕೆ ಹೊಂದಿಕೊಂಡಂತೆ ರಾಜಕಾಲುವೆ (ಚರಂಡಿ) ಇದ್ದು, ಅದರ ಮೇಲೆ ಕೆಲ ವ್ಯಕ್ತಿಗಳು ಮಳಿಗೆಗಳನ್ನು ನಿರ್ಮಿಸಿದ್ದಾರೆ.
ಇದರಿಂದ ಚರಂಡಿ ಸ್ವಚ್ಛಗೊಳಿಸಲು ತೊಡಕಾಗುತ್ತಿದೆ. ನಗರಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜೆ. ಮಂಜುನಾಥ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಮುಖಂಡ ಸಿದ್ದಯ್ಯ ಹಿರೇಮಠ ಮನವಿ ಮಾಡಿದ್ದಾರೆ.