ಶಿಗ್ಗಾವಿ: ‘ಕಂದಾಚಾರ ಹಾಗೂ ಮೂಢನಂಬಿಕೆ ದೂರವಾದರೆ ಸಮಾಜದ ಅಭಿವೃದ್ಧಿ ಸಾಧ್ಯ. ವೈಚಾರಿಕ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸಿದ ರಾಷ್ಟ್ರಕವಿ ಕುವೆಂಪು ಅವರು ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ’ ಎಂದು ದಾವಣಗೆರೆ ಸರ್ಕಾರಿ ಕಾಲೇಜಿನ ಗ್ರಂಥಪಾಲಕಿ ಅನ್ನಪೂರ್ಣ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ನಡೆದ ‘ಮನೆಯಂಗಳದಲ್ಲಿ ಸಾಹಿತ್ಯ ಸೌರಭ’ ಕಾರ್ಯಕ್ರಮ ಹಾಗೂ ಕುವೆಂಪು ಜನ್ಮದಿನದ ನಿಮಿತ್ತ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮೌಢ್ಯತೆ ಸಮಾಜದ ಏಳಿಗೆಯನ್ನು ಕುಠಿತಗೊಳಿಸುತ್ತದೆ. ಇಂದು ದಬ್ಬಾಳಿಗೆ, ದೌರ್ಜ್ಯಗಳು ಹಾಗೂ ಶೋಷಣೆಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಸಾಹಿತ್ಯ ಒಂದು ಮಾರ್ಗವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ವಕೀಲ ಎಫ್.ಎಸ್.ಕೋಣನವರ ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್.ಎಸ್.ಅರಳೆಲೆಮಠ, ಡಾ.ಜಿ.ಸಿ. ನಿಡಗುಂದಿ, ಎಸ್.ಎನ್.ಮುಗಳಿ, ಎನ್.ಎಸ್.ಬರದೂರ, ಪಿ.ಎಸ್.ಗಾಂಜಿ, ಎಸ್.ವಿ.ದೇಶಪಾಂಡೆ, ಪ್ರಾಚಾರ್ಯ ಎಸ್.ವಿ.ಕುಲಕರ್ಣಿ ಇದ್ದರು.
ಕಲಾವಿದ ಬಸವರಾಜ ಶಿಗ್ಗಾವಿ, ಭಾಗ್ಯಜ್ಯೋತಿ ಬಳಿಗಾರ, ವಿಜಯಲಕ್ಷ್ಮಿ ಗೊಟಗೋಡಿ ಅವರು ಕುವೆಂಪು ರಚಿಸಿದ ಗೀತೆಗಳನ್ನು ಹಾಡಿದರು. ನಿವೃತ್ತ ಶಿಕ್ಷಕ ಕಳ್ಳಿಮನಿ ಸ್ವರಚಿತ ಕವನವಾಚನ ಮಾಡಿದರು, ಡಾ.ಲತಾ ನಿಡಗುಂದಿ ಕುವೆಂಪು ಗೀತೆಗೆ ನೃತ್ಯ ಮಾಡಿದರು.