ಹೌರಾ/ಪಶ್ಚಿಮ ಬಂಗಾಳ: ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಇಷ್ರತ್ ಜಹಾನ್ ಅವರು ಭಾನುವಾರ ಕೊಲ್ಕತ್ತಾದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಇಷ್ರತ್ ಅವರು, ‘ನಾನು ತ್ರಿವಳಿ ತಲಾಖ್ ಪದ್ಧತಿಯ ಸಂತ್ರಸ್ಥೆ. ನಾನು ಕೆಳಹಂತದ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟ್ವರೆಗೂ ನ್ಯಾಯಕ್ಕಾಗಿ ಅಲೆದಾಡಿದ್ದೇನೆ. ಕೊನೆಗೂ ನನಗೆ ನ್ಯಾಯ ದೊರಕಿದೆ. ನರೇಂದ್ರ ಮೋದಿ ಅವರು ತ್ರಿವಳಿ ತಲಾಖ್ ಕರಡನ್ನು ಜಾರಿಗೆ ತಂದಿರುವುದಕ್ಕೆ ಬಹಳ ಖುಷಿಯಾಗಿದೆ. ಆದ ಕಾರಣ ನಾನು ಬಿಜೆಪಿ ಪಕ್ಷ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತೇನೆ’ ಎಂದು ಹೇಳಿದ್ದಾರೆ.
ಅಲ್ಲದೇ ಈ ವಿಚಾರವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ನನಗೆ ಯಾವುದೇ ಸಹಾಯ ಹಾಗೂ ಬೆಂಬಲ ದೊರೆಯಲಿಲ್ಲ. ಮಮತಾ ಜೀ ಕೂಡ ಒಬ್ಬ ಮಹಿಳೆಯಾಗಿ ನನಗೆ ಸಹಾಯ ಮಾಡಬೇಕಾಗಿತ್ತು. ಆದರೆ ಅವರಿಂದ ಯಾವುದೇ ಸಹಕಾರ ದೊರೆಯಲಿಲ್ಲ ಎಂದು ಇಷ್ರತ್ ಅಸಮಾಧಾನ ಹೊರಹಾಕಿದ್ದಾರೆ.
ಇಷ್ರತ್ ಜಹಾನ್ ಅವರು ಬಿಜೆಪಿಗೆ ಸೇರಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, ‘ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿದ್ದು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ರಾಜಕೀಯದತ್ತ ಬರಬೇಕು’ ಎಂದು ಹೇಳಿದ್ದಾರೆ.
‘ಇಷ್ರತ್ ಅವರು ಒಬ್ಬ ಧೈರ್ಯಮಂತ ಮಹಿಳೆ. ಅವರ ದಿಟ್ಟತನ ಭಾರತದ ಪ್ರತಿಯೊಬ್ಬ ಮಹಿಳೆಗೂ ಮಾದರಿಯಾಗಿದೆ. ಹೆಚ್ಚಿನ ಮುಸ್ಲಿಂ ಮಹಿಳೆಯರು ಭಾರತದಲ್ಲಿ ತಮ್ಮ ಛಾಪನ್ನು ಮೂಡಿಸಬೇಕು. ರಾಜಕೀಯ ಸೇರುವುದರ ಮೂಲಕ ಇತಿಹಾಸ ಸೃಷ್ಟಿಸಬೇಕು. ರಾಜಕೀಯದ ಕಡೆಗೆ ಒಲವು ತೋರುವ ಮುಸ್ಲಿಂ ಮಹಿಳೆಯರನ್ನು ಬಿಜೆಪಿಯು ಸ್ವಾಗತಿಸುತ್ತದೆ’ ಎಂದು ಹೇಳಿದ್ದಾರೆ.