ಕೋಲ್ಕತ್ತ: ಯುವಜನರಲ್ಲಿ ವಿಜ್ಞಾನದ ಬಗ್ಗೆ ಪ್ರೀತಿ ಮತ್ತು ತಿಳಿವಳಿಕೆ ಹೆಚ್ಚಿಸಲು ವೈಜ್ಞಾನಿಕ ಸಂವಹನದಲ್ಲಿ ಪ್ರಾದೇಶಿಕ ಭಾಷೆಗಳನ್ನು ದೊಡ್ಡ ಮಟ್ಟದಲ್ಲಿ ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
‘ಭಾಷೆ ಯಾವಾಗಲೂ ಕಲಿಯುವಿಕೆಯನ್ನು ಸರಾಗಗೊಳಿಸಬೇಕೇ ವಿನಾ ಅಡ್ಡಿ ಪಡಿಸಬಾರದು’ ಎಂದು ಅವರು ಹೇಳಿದರು.
‘ದೇಶದ ಪ್ರತಿಯೊಬ್ಬ ವಿಜ್ಞಾನಿ ಮತ್ತು ಸಂಶೋಧಕ ‘ನವ ಭಾರತ’ಕ್ಕಾಗಿ ಹೊಸ ಹೊಸ ಪರಿಕಲ್ಪನೆ ಮತ್ತು ಸಂಶೋಧನೆಗಳಿಗೆ ದಾರಿ ತೋರಬೇಕು’ ಎಂದು ಮೋದಿ ಕರೆ ನೀಡಿದರು.
ಭೌತ ವಿಜ್ಞಾನಿ ಪ್ರೊ. ಸತ್ಯೇಂದ್ರ ನಾಥ್ ಬೋಸ್ 125 ಜನ್ಮ ದಿನಾಚರಣೆಗೆ ಪೂರ್ವಭಾವಿಯಾಗಿ ಕೋಲ್ಕತ್ತದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು.
‘ದೇಶದ ವಿಜ್ಞಾನಿಗಳು ಮತ್ತು ಸಂಶೋಧರು ತಮ್ಮ ಜ್ಞಾನವನ್ನು ಜನರ ಅನುಕೂಲಕ್ಕಾಗಿ ಹಾಗೂ ಅವರ ಸಾಮಾಜಿಕ ಆರ್ಥಿಕ ಅಗತ್ಯಗಳನ್ನು ಪೂರೈಸಲು ಬಳಸಬೇಕು’ ಎಂದು ಅವರು ಸಲಹೆ ನೀಡಿದರು.
ವಿನೂತನ ಕಲ್ಪನೆ ಮತ್ತು ಸಂಶೋಧನೆಗಳು ಬಡ ಜನರ ಮೇಲೆ ಬೀರುವ ಸಕಾರಾತ್ಮಕ ಪರಿಣಾಮವನ್ನು ಆಧರಿಸಿ ಅವುಗಳ ಅಂತಿಮ ಫಲಶ್ರುತಿಯನ್ನು ನಿರ್ಣಯಿಸುವುದು ಇಂದಿನ ಜಗತ್ತಿನಲ್ಲಿ ಅತ್ಯಂತ ಮುಖ್ಯ ಎಂದು ಪ್ರಧಾನಿ ಪ್ರತಿಪಾದಿಸಿದರು.
‘ವಿಜ್ಞಾನಿಯೊಬ್ಬರು ಕನಿಷ್ಠ ಒಂದು ಮಗುವಿಗೆ ಮಾರ್ಗದರ್ಶನ ನೀಡಲಿ. ಈ ಮೂಲಕ ಒಂದು ಲಕ್ಷ ವಿದ್ಯಾರ್ಥಿಗಳನ್ನು ವಿಜ್ಞಾನದ ಜಗತ್ತಿಗೆ ಸೇರಿಸಬಹುದು’ ಎಂದು ಅವರು ಹೇಳಿದರು.