ಶ್ರೀರಂಗಪಟ್ಟಣ: ಹೊಸ ವರ್ಷಾಚರಣೆ ನಿಮಿತ್ತ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ಹಾಗೂ ಆಸುಪಾಸಿನ ದೇವಾಲಯಗಳಿಗೆ ಸೋಮವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ನಿರೀಕ್ಷೆಗೂ ಮೀರಿದಷ್ಟು ಭಕ್ತರು ಭೇಟಿ ನೀಡಿದ್ದರು. ಬೆಳಿಗ್ಗೆಯಿಂದ ಸಂಜೆ ವರೆಗೂ ದೇವರ ದರ್ಶನ ಪಡೆದರು. ದೇವಾಲಯದ ಹೊರಗೆ ಸುಮಾರು ಒಂದು ಪರ್ಲಾಂಗು ದೂರದ ವರೆಗೂ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಸ್ಥಳೀಯರ ಮಾತ್ರವಲ್ಲದೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸಿದ್ದರು.
ಪಟ್ಟಣದ ಮುಖ್ಯ ಬೀದಿಯ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯ, ಜೋತಿರ್ಮಹೇಶ್ವರ ದೇವಾಲಯ, ಗಂಗಾಧರೇಶ್ವರ ದೇವಾಲಯ, ಮಹಾಲಕ್ಷ್ಮೀ ದೇವಾಲಯ, ಬಿದ್ದು ಕೋಟೆ ಗಣಪತಿ ದೇಗುಲ, ಇಲ್ಲಿಗೆ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯ, ಟಿ.ಎಂ. ಹೊಸೂರು ಗೇಟ್ ಬಳಿಯ ಮ
ಕಾಳಿ ಮಂದಿರ, ಕರಿಘಟ್ಟದ ಶ್ರೀನಿವಾಸ ದೇವಾಲಯ ಇತರೆಡೆಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ರಂಗನಾಥಸ್ವಾಮಿ ದೇವಾಲಯಕ್ಕೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ಶೈಲಜಾ ಭೇಟಿ ನೀಡಿ ದರ್ಶನ ಪಡೆದರು. ಗಂಜಾಂ ಬಳಿಯ ನಿಮಿಷಾಂಬ ದೇವಾಲಯಕ್ಕೆ ಶೈಲಜಾ ಭೇಟಿ ನೀಡಿದ ವೇಳೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಧನುರ್ಮಾಸನದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಬ್ರಾಹ್ಮೀ ಮುಹೂರ್ತದಲ್ಲೇ ಪೂಜಾ ವಿಧಿ, ವಿಧಾನಗಳು ಆರಂಭವಾದವು.