ಬೆಂಗಳೂರು: ಕೆಂಗೇರಿಯಿಂದ ಮಾಗಡಿ ರಸ್ತೆ ಸಂಪರ್ಕಿಸುವ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕೆ ಭೂಮಿ ಕಳೆದುಕೊಳ್ಳುವ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದ ಭೂಮಿ ಸಿಗಲಿದೆ.
ನೂರು ಅಡಿ ಅಗಲದ ರಸ್ತೆಗಾಗಿ 321 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಅಭಿವೃದ್ಧಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡವರಿಗೆ ಇಲ್ಲಿಯವರೆಗೆ ಅಭಿವೃದ್ಧಿ ಪಡಿಸಿದ ಅಥವಾ ಬೇರೆ ಪ್ರದೇಶದಲ್ಲಿ 60:40ರ ಅನುಪಾತ (40 ರಷ್ಟು ರೈತರಿಗೆ) ಸಿಗುತ್ತಿತ್ತು.
ಈ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಅನುಪಾತ ಪ್ರಮಾಣವನ್ನು 50:50ಕ್ಕೆ ಬದಲಾವಣೆ ಮಾಡಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಬಾಡಿಗೆ ಸೈಕಲ್ ಯೋಜನೆ: ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಬಾಡಿಗೆಗೆ ಸೈಕಲ್ ನೀಡುವ ಯೋಜನೆಗೆ ಮೀಸಲಿಟ್ಟಿದ್ದ ₹80 ಕೋಟಿ ಮೊತ್ತವನ್ನು ಸೈಕಲ್ ಪಾರ್ಕಿಂಗ್ ಹಾಗೂ ಸೈಕಲ್ ಹಬ್ (ಪ್ರತ್ಯೇಕ ಪಥ) ನಿರ್ಮಾಣಕ್ಕೆ ಬಳಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಎಂ.ಜಿ. ರಸ್ತೆ, ವಿಧಾನಸೌಧ, ಕೋರಮಂಗಲ, ಇಂದಿರಾ ನಗರ, ಎಚ್ಎಸ್ಆರ್ ಬಡಾವಣೆ, ಎಚ್ಆರ್ ಬಿಆರ್ ಬಡಾವಣೆ, ಎಚ್ಬಿಆರ್ ಬಡಾವಣೆಗಳಲ್ಲಿ ಈ ಯೋಜನೆ ಮೊದಲ ಹಂತದಲ್ಲಿ ಅನುಷ್ಠಾನಗೊಳ್ಳಲಿದೆ. ಯೋಜನೆಯ ನಿರ್ವಹಣೆ ಹೊಣೆಯನ್ನು ಟೆಂಡರ್ ಮೂಲಕ ಖಾಸಗಿಯವರಿಗೆ ವಹಿಸಲು ಸಭೆ ಒಪ್ಪಿಗೆ ಸೂಚಿಸಿದೆ.