ಕವಿತಾಳ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಹೆಸರು ನೋಂದಣಿ ಮಾಡಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ರೈತರು ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಈಚೆಗೆ ಪಟ್ಟಣದಲ್ಲಿ ಆರಂಭವಾದ ಖರೀದಿ ಕೇಂದ್ರದ ವ್ಯಾಪ್ತಿಗೆ ಕವಿತಾಳ, ಪಾಮನಕಲ್ಲೂರು, ಮಲ್ಲಟ, ಹೀರಾ ಮತ್ತು ಹಾಲಾಪುರ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳನ್ನು ಸೇರಿಸಲಾಗಿದೆ.
ಪಹಣಿ, ಆಧಾರ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್ ಸೇರಿದಂತೆ ಇತರ ದಾಖಲೆಗಳನ್ನು ನೀಡಿ ರೈತರು ಹೆಸರು ನೋಂದಣಿ ಮಾಡುತ್ತಿದ್ದಾರೆ. ಕವಿತಾಳ ಹೋಬಳಿಯ 20 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂದಾಜು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ ಬಿತ್ತೆನೆ ಮಾಡಿದ್ದಾರೆ.
ಪಾಮನಕಲ್ಲೂರು ಹೋಬಳಿಯ 20 ಹಳ್ಳಿಗಳಲ್ಲಿ ಅಂದಾಜು 2 ಸಾವಿರ, ಮಲ್ಲಟ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 3.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತೆನೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಕೊನೆ ಭಾಗದ ಹರ್ವಾಪುರ, ಆನಂದಗಲ್ ಸೇರಿದಂತೆ ವಿವಿಧ ಹಳ್ಳಿಗಳ ರೈತರು 25–30 ಕಿ.ಮೀ ದೂರದಿಂದ ಕವಿತಾಳ ಖರೀದಿ ಕೇಂದ್ರಕ್ಕೆ ಬರುವಂತಾಗಿದೆ. ಹೀಗಾಗಿ ಪಾಮನಕಲ್ಲೂರು ಗ್ರಾಮದಲ್ಲಿ ಪ್ರತೇಕ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಪಾಟೀಲ ವಟಗಲ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.