ಕೊಪ್ಪಳ: ‘ಸಿನಿಮಾ ಕೇವಲ ಮನೋರಂಜನೆ ಅಲ್ಲ. ಅದು ವಿಜ್ಞಾನದಿಂದ ಉದ್ಭವವಾದ ಕಲೆ’ ಎಂದು ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಹೇಳಿದರು.
ನಗರದ ಗವಿಮಠದ ಜಾತ್ರೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಚಿತ್ರಗಳ ಮೂಲಕ ಪ್ರೇಕ್ಷಕನಿಗೆ ಮನೋವಿಕಾಸ ಆಗುತ್ತದೆ. ಜ್ಞಾನ ಹೊಂದಲು ಸಹಕಾರಿ. ಸಿನಿಮಾ ವೀಕ್ಷಿಸಿದ ಮೇಲೆ ಪ್ರೇಕ್ಷಕನಲ್ಲಿ ಧನಾತ್ಮಕ ಪ್ರಶ್ನೆಗಳು ಹುಟ್ಟಬೇಕು. ಧನಾತ್ಮಕ ಚಿತ್ರಗಳಿಂದ ಮಾತ್ರ ಇಂತಹ ಗುಣವನ್ನು ನಿರೀಕ್ಷಿಸಲು ಸಾಧ್ಯ. ಇಲ್ಲಿ ಹಮ್ಮಿಕೊಂಡಿರುವ ಚಿತ್ರೋತ್ಸವದ ಚಿತ್ರಗಳು ಇಂತಹ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡುತ್ತವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಸಿದ್ದಲಿಂಗಪ್ಪ ಕೋಟ್ನೆಕಲ್ ಮಾತನಾಡಿ, ‘ಓದಿಗಿಂತ ಅನುಭವ ಬಹಳ ಮುಖ್ಯ. ಜೀವನಕ್ಕೆ ಹತ್ತಿರವಾದ ಅಂತಹ ಅನುಭವಪೂರಿತವಾದ ವಿಷಯಗಳನ್ನ ಹಾಗೂ ಅನೇಕ ನೈಜ ಘಟನೆಗಳ ಪ್ರತಿರೂಪವನ್ನ ಚಲನಚಿತ್ರಗಳು ಒದಗಿಸುತ್ತವೆ’ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶಿವರಾಮ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಗವಿಸಿದ್ದೇಶ್ವರ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಎಸ್.ದಾದ್ಮಿ ಇದ್ದರು.
ಶಿವನಗೌಡ ಪಾಟೀಲ ನಿರೂಪಿಸಿದರು. ಎ.ಜಿ.ಅರುಣ ಸ್ವಾಗತಿಸಿದರು. ಡಾ.ಬಸವರಾಜ ಪೂಜಾರ್ ಕಾರ್ಯಕ್ರಮ ನಿರ್ವಹಿಸಿ ದರು. ಬಳಿಕ ನಿರ್ದೇಶಕ ಪಿ. ಶೇಷಾದ್ರಿ ಅವರೊಂದಿಗೆ ಸಂವಾದ ನಡೆಯಿತು.