ಕಾರವಾರ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದ್ದ ಮಂಗಳವಾರದ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
‘ಐಎಂಎ ಮುಷ್ಕರ ಹೂಡುವುದಾಗಿ ಕೊನೆಯ ಅವಧಿಯಲ್ಲಿ ತಿಳಿಸಿತು. ಯಾವುದೇ ಮುನ್ಸೂಚನೆ ನೀಡದೆ ಮುಷ್ಕರ ಹೂಡಿದರೆ ಜಿಲ್ಲೆಯ ಜನತೆಗೆ ಸಮಸ್ಯೆ ಉಂಟಾಗಬಹುದು ಎಂದು ಎಂದಿನಂತೆ ಎಲ್ಲರೂ ಕಾರ್ಯನಿರ್ವಹಿಸಿದೆವು’ ಎಂದು ಐಎಂಎಯ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಸುರೇಶ್ ಭಟ್ ತಿಳಿಸಿದರು.
ಆದರೆ ಮಾಧ್ಯಮಗಳಲ್ಲಿ ಇತರ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ (ಒಪಿಡಿ) ತೆರೆಯದಿರುವುದನ್ನು ನೋಡಿದ್ದ ಜನರು ಇಲ್ಲೂ ಕೂಡ ಮುಷ್ಕರ ಇರುವುದಾಗಿ ನಂಬಿದ್ದರು. ಹೀಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗಳ ಒಪಿಡಿಗೆ ಜನರು ಕಡಿಮೆ ಇದ್ದರು.
ಮನವಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.