ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಬೆಂಬಲಿಗರಿಂದ ದೂರವಾಣಿ ಕರೆಗಳು ಬಂದಿದ್ದರಿಂದ ಮೇವು ಹಗರಣದ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟಿಸುವುದನ್ನು ಮುಂದೂಡಲಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಶಿವಪಾಲ್ ಸಿಂಗ್ ಗುರುವಾರ ತಿಳಿಸಿದ್ದಾರೆ.
ಹೀಗಾಗಿ ಸತತ ಎರಡನೇ ದಿನವೂ ಶಿಕ್ಷೆ ಪ್ರಮಾಣ ಪ್ರಕಟವಾಗಿಲ್ಲ. ಶಿಕ್ಷೆ ಪ್ರಮಾಣವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕಟಿಸಬೇಕೋ ಅಥವಾ ನ್ಯಾಯಾಲಯದಲ್ಲಿ ಪ್ರಕಟಿಸಬೇಕೋ ಎಂಬುದನ್ನು ನಾಳೆ ನಿರ್ಧರಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಲಾಲು ಬೆಂಗಲಿಗರಿಂದ ಬಂದ ದೂರವಾಣಿ ಕರೆಗಳ ಬಗ್ಗೆ ನ್ಯಾಯಮೂರ್ತಿ ಶಿವರಾಜ್ ಸಿಂಗ್ ಹೆಚ್ಚಿನ ಮಾಹಿತಿ ನೀಡಿಲ್ಲ.
ಡಿಸೆಂಬರ್ 23ರಂದು ಮೇವು ಹಗರಣದಲ್ಲಿ ಲಾಲು ಪ್ರಸಾದ್ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದ್ದನ್ನು ಟಿವಿ ವಾಹಿನಿಗಳಲ್ಲಿ ಟೀಕಿಸಿದ್ದ ಆರ್ಜೆಡಿ ಮತ್ತು ಕಾಂಗ್ರೆಸ್ ಮುಖಂಡರಿಗೆ ನ್ಯಾಯಾಲಯ ಬುಧವಾರ ನೊಟೀಸ್ ನೀಡಿತ್ತು.