ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಹಂಚಿಕೆಗೆ ಮೂರು ಹಂತದ ಸಮೀಕ್ಷೆ; ರಾಜ್ಯದಲ್ಲಿ ಮೋದಿ ಪ್ರಚಾರಕ್ಕೇ ಬಿಜೆಪಿ ಹೈಕಮಾಂಡ್‌ ಒಲವು

Last Updated 8 ಫೆಬ್ರುವರಿ 2018, 9:00 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ನಿರ್ಧರಿಸಿರುವ ಬಿಜೆಪಿಯ ವರಿಷ್ಠರು, ಮೂರು ಹಂತದ ಆಂತರಿಕ ಸಮೀಕ್ಷೆಯ ವರದಿಯನ್ನು ಆಧರಿಸಿಯೇ ಟಿಕೆಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.

ಆಯಾ ಕ್ಷೇತ್ರಗಳ ಮತದಾರರ ಒಲವು ಯಾವ ಪಕ್ಷದ ಕಡೆ ಇದೆ, ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಯುವುದು ಮೊದಲ ಹಂತದ ಸಮೀಕ್ಷೆ. ಒಂದೊಮ್ಮೆ ಜನರ ಒಲವು ಬಿಜೆಪಿ ಕಡೆ ಇದ್ದಲ್ಲಿ, ಯಾವ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬುದನ್ನು ಅರಿಯುವುದು ಎರಡನೇ ಹಂತದ ಸಮೀಕ್ಷೆ. ಮತದಾರರ ಒಲವು ಅನ್ಯ ಪಕ್ಷಗಳತ್ತ ಇದ್ದಲ್ಲಿ ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಿದರೆ ಮತದಾರರ ಮನಸ್ಥಿತಿ ಬದಲಿಸಲು ಸಾಧ್ಯ ಎಂಬುದನ್ನು ತಿಳಿಯುವುದು ಮೂರನೇ ಹಂತದ ಸಮೀಕ್ಷೆ.

ಇದಲ್ಲದೆ, ಕಾಂಗ್ರೆಸ್‌, ಜೆಡಿಎಸ್‌, ಪಕ್ಷೇತರರು ಅಥವಾ ಇತರ ಯಾವುದಾದರೂ ಪಕ್ಷಗಳ ಅಭ್ಯರ್ಥಿಗಳತ್ತ ಕ್ಷೇತ್ರದ ಮತದಾರರ ಒಲವು ಇರುವುದು ಕಂಡುಬಂದಲ್ಲಿ, ಯಾವ ತಂತ್ರ ಅನುಸರಿಸಬೇಕು ಎಂಬುದನ್ನು ತಿಳಿಯಲು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರೆ ಒಳಿತು ಎಂದು ಪಕ್ಷದ ‘ಚಿಂತಕರ ಚಾವಡಿ‘ ಬಯಸಿದೆ ಎಂದು ಹೈಕಮಾಂಡ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ರಾಜ್ಯದ 100ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಕಂಡುಬರುತ್ತಿಲ್ಲ’ ಎಂಬ ಅಭಿಪ್ರಾಯಗಳು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದಲೇ ವ್ಯಕ್ತವಾಗಿರುವುದರಿಂದ ವಿಶಿಷ್ಟ ತಂತ್ರ ಅನುಸರಿಸಲು ನಿರ್ಧರಿಸಲಾಗಿದೆ. ಇತರ ಪಕ್ಷಗಳತ್ತಲೇ ಮತದಾರರ ಒಲವು ಇರುವ ಕ್ಷೇತ್ರಗಳಲ್ಲಿ ಈಹಿಂದೆ ಸ್ಪರ್ಧಿಸಿ ಗೆದ್ದಿರುವ ಅಥವಾ ಸೋತಿರುವ ತಮ್ಮ ಅಭ್ಯರ್ಥಿಗಳನ್ನು ಬದಲಿಸಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿದಲ್ಲಿ ಪಕ್ಷಕ್ಕೆ ಗೆಲುವು ದೊರೆಯಬಹುದೇ ಎಂಬುದನ್ನೂ ಕಾರ್ಯಕರ್ತರಿಂದಲೇ ಅರಿಯಲು ತೀರ್ಮಾನಿಸಲಾಗಿದೆಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದರು.

ಇದುವರೆಗೆ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಟಿಕೆಟ್‌ ಬಗ್ಗೆ ಭರವಸೆ ನೀಡಿಲ್ಲ. ಫೆಬ್ರುವರಿ ಅಂತ್ಯದ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ನಂತರ
ವಷ್ಟೇ ಸ್ಪರ್ಧಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ವಿವರಿಸಿದರು.

ಪ್ರತಿ ಜಿಲ್ಲೆಗೆ ಪ್ರಧಾನಿ: ಕಳೆದ ತಿಂಗಳು ನಡೆದಿರುವ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ 44ಕ್ಕೂ ಹೆಚ್ಚು ಬಹಿರಂಗ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆಗಾಗಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಸಭೆ ಏರ್ಪಡಿಸುವ ಕುರಿತು ಚಿಂತನೆ ನಡೆದಿದೆ. ಚುನಾವಣೆ ಘೋಷಣೆ ಆದ ಬಳಿಕ ನಿಗದಿತ ದಿನಗಳಂದು 5ರಿಂದ 6 ಸಭೆಗಳಲ್ಲಿ ಭಾಗವಹಿಸುವ ಕುರಿತೂ ಮೋದಿ ಆಸಕ್ತಿ ತಾಳಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾ ಕೇಂದ್ರ ಹಾಗೂ ದೊಡ್ಡದೊಡ್ಡ ಪಟ್ಟಣಗಳಲ್ಲಿ ಪ್ರಧಾನಿಯವರ ಸಭೆಗಳಲ್ಲಿ ಆಯೋಜಿಸುವ ಮೂಲಕ ಮತದಾರರನ್ನು ಸೆಳೆಯಬೇಕು ಎಂಬುದು ವರಿಷ್ಠರ ಆಲೋಚನೆಯಾಗಿದೆ. ಇದೇ 30ರಂದು ನಡೆಯಲಿರುವ ಪಕ್ಷದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲೂ ಮೋದಿ ಭಾಗವಹಿಸಲಿದ್ದು, ಚುನಾವಣೆ ಘೋಷಣೆ ಆಗುವುದರೊಳಗೇ ಅವರು ನಾಲ್ಕಾರು ಬಾರಿ ರಾಜ್ಯ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT