ಬೆಂಗಳೂರು: ‘ಇಂದಿನ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಯೇ ಛಿದ್ರವಾಗುತ್ತಿದೆ. ಮುಂದಿನ ಪೀಳಿಗೆಯ ಪರಿಸ್ಥಿತಿ ಏನಾಗಬಹುದೆಂಬ ಆತಂಕ ಎಲ್ಲರನ್ನೂ ಕಾಡಲಾರಂಭಿಸಿದೆ’ ಎಂದು ನಟ ರಮೇಶ್ ಭಟ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಸಪ್ನಾ ಬುಕ್ ಹೌಸ್ ಮತ್ತು ರೊದ್ದಂ ಕುಟುಂಬ ಆಯೋಜಿಸಿದ್ದ ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಮುಖ್ಯ ವ್ಯವಸ್ಥಾಪಕ ಶ್ರಿನಿವಾಸ ರೊದ್ದಂ ಅವರು ರಚಿಸಿರುವ ‘ಓಹ್ ಅವರ್ ಬ್ಯಾಂಕ್’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.
‘ಇಂದು ಬಹುತೇಕ ಮನೆಗಳಲ್ಲಿ ಹಿರಿಯರಿಲ್ಲ. ಮಕ್ಕಳಿಗೆ ಕಥೆ ಹೇಳುವವರೂ ಇಲ್ಲ. ಪತಿ– ಪತ್ನಿ ಇಬ್ಬರೂ ದುಡಿಯುವ ಒತ್ತಡಕ್ಕೆ ಬಿದ್ದು ದಿನದ ಬಹುಪಾಲನ್ನು ಸಂಚಾರ ದಟ್ಟಣೆಯಲ್ಲಿ, ಕಚೇರಿಗಳಲ್ಲಿ ಕಳೆಯುತ್ತಿದ್ದಾರೆ’ ಎಂದರು.
‘ಈಗಿನ ಪೀಳಿಗೆಯವರ ಜೀವನಶೈಲಿ ನೋಡಿದರೆ ನಾವೇ ಭಾಗ್ಯಶಾಲಿಗಳು ಎನಿಸುತ್ತದೆ. ಮುಂದಿನ ಪೀಳಿಗೆಯವರ ಬದುಕಿನ ಸ್ಥಿತಿ ಬಗ್ಗೆ ಯೋಚಿಸಿದರೆ ಆತಂಕ ಉಂಟಾಗುತ್ತದೆ’ ಎಂದರು.
ರೊದ್ದಂ ಅವರ ಕಾದಂಬರಿಗಳಿಗೆ ಓದಿಸಿಕೊಳ್ಳುವ ಗುಣವಿದೆ ಎಂದು ಕಾರ್ಪೋರೇಷನ್ ಬ್ಯಾಂಕ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಲ್.ಗೋಪಾಲಕೃಷ್ಣ ಹೇಳಿದರು.
ಪುಸ್ತಕ ಶೀರ್ಷಿಕೆ: ಓಹ್ ಅವರ್ ಬ್ಯಾಂಕ್ (ಕಾದಂಬರಿ)
ಲೇಖಕರು: ಶಿವರಾಂ ರೊದ್ದಂ
ಪ್ರಕಾಶಕರು: ಸಪ್ನ ಬುಕ್ ಹೌಸ್
ಬೆಲೆ: ₹350; ಪುಟ:328
ಸಂಪರ್ಕ: ಛಾಯಾ ಸಾಹಿತ್ಯ, #993, 1ನೇ ಮುಖ್ಯ ರಸ್ತೆ, ಎಂ.ಸಿ.
ಲೇಔಟ್, ವಿಜಯನಗರ, ಬೆಂಗಳೂರು –560040