ಜಮ್ಮು–ಕಾಶ್ಮೀರ: ಉತ್ತರ ಭಾರತದ ಹಲವು ಭಾಗಗಳಲ್ಲಿ ಉಷ್ಣಾಂಶ ಇಳಿಕೆಯಿಂದಾಗಿ ನಿತ್ಯದ ಅಗತ್ಯ ಕೆಲಸಗಳನ್ನು ಪೂರೈಸಿಕೊಳ್ಳುವುದು, ಅತ್ಯಗತ್ಯ ವಸ್ತುಗಳನ್ನು ಪಡೆಯಲು ಪರದಾಡುವ ಸ್ಥಿತಿ ಎದುರಾಗಿದೆ.
ಜಮ್ಮು ಮತ್ತು ಕಾಶ್ಮೀರದ ಲೆಹ್ನಲ್ಲಿ ರಾತ್ರಿ ಉಷ್ಣತೆ –17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆ ಇಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೀರಿನ ಕೊಳವೆ ಸಂಪರ್ಕ ಹೆಪ್ಪು ಗಟ್ಟಿದೆ. ಮಂಜುಗಡ್ಡೆ ಕರಗಿಸಿ ನೀರು ಪಡೆಯಲು ಕೊಳವೆ ಮಾರ್ಗದಲ್ಲಿ ಬೆಂಕಿಯಿಟ್ಟು ಬಿಸಿ ಮಾಡಲಾಗುತ್ತಿದೆ.
ಉತ್ತರ ಪದೇಶ, ದೆಹಲಿಯಲ್ಲಿಯೂ ದಟ್ಟ ಮಂಜು ಆವರಿಸಿರುವುದು ಭಾನುವಾರವೂ ಮುಂದುವರಿದೆ. ಹೊಂಜಿನ ಕಾರಣದಿಂದ ದೆಹಲಿ ಮಾರ್ಗದ 28 ರೈಲುಗಳ ಸಂಚಾರ ರದ್ದುಗೊಂಡಿದ್ದು, 36 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ದೆಹಲಿಯಲ್ಲಿ ದಟ್ಟ ಮಂಜಿನಿಂದ ರಸ್ತೆ ಮಾರ್ಗದ ಸಂಚಾರದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇಂದು ಕಾರು ಡಿಕ್ಕಿಯಾಗಿ ನಾಲ್ಕು ಜನರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.