ಮೋಳೆ (ಬೆಳಗಾವಿ ಜಿಲ್ಲೆ): ‘ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದ ಕಾಂಗ್ರೆಸ್ ರಾಜ್ಯದಲ್ಲಿ ಈಗಿಲ್ಲ. ಬದಲಿಗೆ, ಕೇವಲ ಬೂಟಾಟಿಕೆ ಮಾಡುವ ಸಿದ್ದರಾಮಯ್ಯನ ಕಾಂಗ್ರೆಸ್ ಮಾತ್ರ ಇದೆ’ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ ಲೇವಡಿ ಮಾಡಿದರು. ಜೆಡಿಎಸ್ ಆಯೋಜಿಸಿದ್ದ ‘ಕುಮಾರ ಪರ್ವ 2018’ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಬೂಟಾಟಿಕೆ ಮಾಡುವವರೊಂದಿಗೆ ರಾಜಕಾರಣ ಮಾಡಲು ಆಗುವುದಿಲ್ಲ ಎಂದು ಜೆಡಿಎಸ್ ಪಕ್ಷ ಸೇರಿದ್ದೇನೆ’ ಎಂದು ಹೇಳಿದರು. ‘ಕಾಂಗ್ರೆಸ್ ಈಗ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಕೇವಲ ಪ್ರಾದೇಶಿಕ ಪಕ್ಷವಾಗಿದೆ ಅಷ್ಟೇ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ. ಆ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳದೇ ಮಿಮಿಕ್ರಿ ಮಾಡುವವರ ತರಹ ವರ್ತಿಸುತ್ತಿದ್ದಾರೆ’ ಎಂದು ಅವರು ಟೀಕಿಸಿದರು.
ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರಿದ ಶ್ರೀಶೈಲ ತುಗಶೆಟ್ಟಿ, ಸುನೀತಾ ಹೊನಕಾಂಬಳೆ, ಪ್ರಕಾಶ ಹಳ್ಳೋಳ್ಳಿ, ಗಿರೀಶ ಬುಟಾಳೆ, ಶ್ರೀಶೈಲ ಹಳದಮಳ, ರಾಜೇಂದ್ರ ಐಹೋಳೆ, ಶಂಕರ ಮಾಡಲಗಿ, ಗಂಗಾಧರ ಕುಲಕರ್ಣಿ, ರಮೇಶ ಬಿರಡಿಕರ, ಬಿ.ಆರ್. ಪಾಟೀಲ ಇದ್ದರು.