ಸವಣೂರ: ‘ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ದಾಸ ಶ್ರೇಷ್ಠ ಕನಕದಾಸರು ಈ ಮಣ್ಣಿನಲ್ಲಿ ಹುಟ್ಟಿರು ವುದು ನಮ್ಮೆಲ್ಲರ ಪುಣ್ಯ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದ ಸಾಹಿತಿ ವಿ.ಕೃ.ಗೋಕಾಕ ವೇದಿಕೆಯಲ್ಲಿ ಶನಿವಾರ ನಡೆದ ‘6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ತಾಲ್ಲೂಕು ಸಾಹಿತ್ಯಿಕವಾಗಿ ಉನ್ನತ ಸ್ಥಾನದಲ್ಲಿದೆ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ವಿ.ಕೃ.ಗೋಕಾಕ ಇದೇ ಮಣ್ಣಿನವರು ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ. ಸವಣೂರಿನಲ್ಲಿ ನವಾಬರ ಆಳ್ವಿಕೆ ಕಾಲ ದಲ್ಲಿಯೂ ಕನ್ನಡ ಸಾಹಿತ್ಯಕ್ಕೆ ಯಾವುದೇ ಅಡ್ಡಿ ಬಂದಿಲ್ಲ. ನಮ್ಮ ತಾಲ್ಲೂಕು ಕೃಷಿ, ವ್ಯಾಪಾರದೊಂದಿಗೆ ಸಾಹಿತ್ಯಕ್ಕೂ ಹೆಸರುವಾಸಿಯಾಗಿದೆ’ ಎಂದರು.
‘ವಿ.ಕೃ.ಗೋಕಾಕ ಭವನ ನಿರ್ಮಾಣ ಗೊಂಡು ಮೂರು ವರ್ಷಗಳೇ ಕಳೆದಿವೆ. ಶೀಘ್ರವೇ ಉದ್ಘಾಟನೆಯಾಗಿ ಜನರಿಗೆ ಉಪಯೋಗವಾಗಬೇಕು’ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ನಾವು ನಮ್ಮ ಕೊನೆಯ ಉಸಿರಿರುವತನ ಕನ್ನಡ ಭಾಷೆಯ ಸೇವೆಗೆ ಸಿದ್ಧವಾಗಿರಬೇಕು’ ಎಂದರು. ಕಲ್ಮಠದ ಮಹಾಂತ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ದುಗ್ಗತ್ತಿ, ಸಾಹಿತಿಗಳಾದ ಇಮಾಮ್ ಸಾಹೇಬ್ ತಿಮ್ಮಾಪುರ, ಧಾರವಾಡದ ಸಾಹಿತಿ ಡಾ.ಬಾಳಣ್ಣ ಶಿಗೀಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭು ಅರಗೋಳ, ಮೋಹನ ಮೆಣಸಿನಕಾಯಿ, ನೀಲಪ್ಪ ಅಂಬಲಿಯವರ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ ಸಾಲಿಮಠ, ಪುರಸಭೆ ಅಧ್ಯಕ್ಷ ಖಲಂದರ್ ಅಹ್ಮದ್ ಅಕ್ಕೂರ, ಮಲ್ಲಿಕಾರ್ಜುನ ಶಾಂತಗಿರಿ, ಉಪಾಧ್ಯಕ್ಷೆ ರಾಜೇಶ್ವರಿ ಬುಶೇಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಸ್.ಸುಧಾಕರ್. ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಪರಶುರಾಮ ಈಳಗೇರ, ಗಂಗಾಧರ ಬಾಣದ ಹಾಗೂ ಧರೇಪ್ಪಗೌಡ ಪಾಟೀಲ ಇದ್ದರು.
* *
ಸಾಮಾಜಿಕ ಜೀವನದಲ್ಲಿ ಅವಮಾನ, ಅಪಮಾನ ಹಾಗೂ ನಷ್ಟ ಎಂಬುದೇ ಹೆಚ್ಚು. ನಮ್ಮಲ್ಲಿ ಪ್ರಾಮಾಣಿಕತೆ ಕಣ್ಮರೆಯಾದರೆ ಮಾತ್ರ ನಮಗೆ ಗೌರವ ದೊರೆಯುವುದಿಲ್ಲ.
ರುದ್ರಪ್ಪ ಲಮಾಣಿ
ಜಿಲ್ಲಾ ಉಸ್ತುವಾರಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.