ಮುಂಬೈ: ‘ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಗಳು ಸಾರಾ ಅವರನ್ನು ನನಗೆ ಮದುವೆ ಮಾಡಿಕೊಡಬೇಕು. ಇಲ್ಲವಾದರೆ ಆಕೆಯನ್ನು ಅಪಹರಿಸುತ್ತೇನೆ’ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಬಂಧಿತನನ್ನು ದೇವ್ಕುಮಾರ್ ಮೈಥಿ (32) ಎಂದು ಗುರುತಿಸಲಾಗಿದೆ. ಈತ ಸಚಿನ್ ಮನೆಗೆ ಸುಮಾರು 20 ಬಾರಿ ಕರೆಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಅನುಚಿತ ಕರೆಗಳು ಬಂದಾಗ ಸಾರಾ ಅವರು ಬಾಂದ್ರಾ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
‘ಟಿ.ವಿಯಲ್ಲಿ ಪಂದ್ಯವೊಂದನ್ನು ವೀಕ್ಷಿಸುವಾಗ ಪೆವಿಲಿಯನ್ನಲ್ಲಿದ್ದ ಸಾರಾಳನ್ನು ನೋಡಿ, ಪ್ರೀತಿ ಮಾಡಲು ಆರಂಭಿಸಿದೆ. ಅವಳನ್ನು ಮದುವೆಯಾಗಲು ಬಯಸಿದೆ. ಅವಳನ್ನು ಒಮ್ಮೆಯೂ ಖುದ್ದಾಗಿ ಭೇಟಿಯಾಗಿಲ್ಲ’ ಎಂದು ಹೇಳಿರುವ ದೇವ್ಕುಮಾರ್, ತಾನು ಕರೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ದೇವ್ಕುಮಾರ್ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ಕಾಲೇಜಿನ ಓದನ್ನು ಅರ್ಧಕ್ಕೆ ಬಿಟ್ಟಿರುವ ಆತ ನಿರುದ್ಯೋಗಿಯಾಗಿದ್ದ ಎಂದು ಆತನ ಕುಟುಂಬ ಸದಸ್ಯರು ತಿಳಿಸಿದ್ದಾರೆ. ‘ಮನೆಯಲ್ಲಿಯೂ ಅವನು ಪೋಷಕರನ್ನು ಪೀಡಿಸುತ್ತಿದ್ದ. ಇತ್ತೀಚೆಗೆ ತಂದೆಯನ್ನು ಕಳೆದುಕೊಂಡಿರುವ ಆತ, ಎಂಟು ವರ್ಷಗಳಿಂದ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಅವರು ಹೇಳಿಕೆ ನೀಡಿದ್ದಾರೆ.
ಆರೋಪಿಯ ಮನೆಯಲ್ಲಿ ಪೊಲೀಸರು ಡೈರಿಯೊಂದನ್ನು ಪರಿಶೀಲಿಸಿದಾಗ, ಅದರಲ್ಲಿ ‘ಸಚಿನ್ ಮಗಳು ತನ್ನ ಹೆಂಡತಿ’ ಎಂಬ ಬರಹ ಕಂಡಿದೆ. ಆರೋಪಿ ನಿಜವಾಗಿಯೂ ಮಾನಸಿಕ ಅಸ್ವಸ್ಥನೇ ಎಂಬುದನ್ನು ತಿಳಿಯಲು ವೈದ್ಯಕೀಯ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಆತನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು ವಿಚಾರಣೆ ನಡೆಯುತ್ತಿದೆ.