ಮಂಡ್ಯ: ಶ್ರೀಕ್ಷೇತ್ರ ಶ್ರವಣ ಬೆಳಗೊಳದ ಮಠಾಧೀಶ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃದಲ್ಲಿ ಮಹಾಮಸ್ತಕಾಭಿಷೇಕಕ್ಕಾಗಿ ನಡೆಯುವ ಪ್ರಚಾರ ಪ್ರಭಾವನಾ ರಥಯಾತ್ರೆಗೆ ಜಿಲ್ಲೆಯಲ್ಲಿ ಸ್ವಾಗತ ನೀಡಿರುವುದು ಸಂತೋಷ ಎಂದು ತಹಶೀಲ್ದಾರ್ ಎಲ್.ನಾಗೇಶ್ ಹೇಳಿದರು.
ನಗರದ ನಗರಸಭೆ ಬಳಿ ಗೊಮ್ಮಟೇಶ್ವರ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ನಿಮಿತ್ತ ರಾಜ್ಯದಾದ್ಯಂತ ಸಂಚರಿಸುತ್ತಿರುವ ಪ್ರಭಾವನಾ ರಥಯಾತ್ರೆಗೆ ಶನಿವಾರ ಸ್ವಾಗತ ಕೋರಿ ಅವರು ಮಾತನಾಡಿದರು.
ಎಸ್.ಡಿ.ಜೆ.ಎಂ.ಐ. ಮ್ಯಾನೇಜಿಂಗ್ ಕಮಿಟಿ ಟ್ರಸ್ಟ್ನ ಅಧ್ಯಕ್ಷರೂ ಆಗಿರುವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಸೇವೆ ಅನನ್ಯವಾದುದು. ಅವರ ಮಾರ್ಗದರ್ಶನದಲ್ಲಿ ಪ್ರಭಾವನಾ ರಥಯಾತ್ರೆ ನಡೆಯುತ್ತಿರುವುದು ಉತ್ತಮ ಕೆಲಸ ಆಗಿದೆ. ಇದು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವವು ಸಾವಿರಾರು ವರ್ಷಗಳಿಂದ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಫೆಬ್ರವರಿ ತಿಂಗಳಿನಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವವು ನಡೆಯಲಿದೆ ಎಂದರು.
ಮಹಾಮಸ್ತಕಾಭಿಷೇಕದ ಮಹೋತ್ಸವಕ್ಕೆ ಜಿಲ್ಲೆಯಿಂದ ಹೆಚ್ಚಿನ ಭಕ್ತಾಧಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಮುಖಂಡರಾದ ಮಹೇಂದ್ರಬಾಬು ಜೈನ್, ಶಶಿಧರ್ ಜೈನ್, ಶಾಂತಿ ಪ್ರಸಾದ್ ಜೈನ್, ಶ್ರೀಧರ್ ಜೈನ್, ಎಂ.ವಿ.ಧರಣೇಂದ್ರಯ್ಯ ಇದ್ದರು.