ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ 17 ಸಾವಿರ ಸದಸ್ಯರಿದ್ದಾರೆ. ಇವರ ಪೈಕಿ ಶೇ 5ರಷ್ಟು ಜನರ ಜನ್ಮದಾಖಲೆಯಲ್ಲಿ (1999ಕ್ಕೂ ಮೊದಲಿನ) ವೀರಶೈವ ಅಥವಾ ವೀರಶೈವ ಲಿಂಗಾಯತ ಎಂದು ನಮೂದಾಗಿದ್ದನ್ನು ಸಾಬೀತುಪಡಿಸಿದರೂ ತಾವು ಮಹಾಸಭಾದ ನಿಲುವಿಗೆ ತಲೆಬಾಗುವುದಾಗಿ ಸಚಿವ ಎಂ.ಬಿ. ಪಾಟೀಲ ಸೋಮವಾರ ಇಲ್ಲಿ ಹೇಳಿದರು.
ಈ ವಿಷಯವಾಗಿ, ಮಹಾಸಭಾದ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಎನ್. ತಿಪ್ಪಣ್ಣ ಅವರಿಗೆ ಸವಾಲು ಹಾಕುವುದಾಗಿ ಹೇಳಿದ ಅವರು, ತಮ್ಮ ಸವಾಲು ಸ್ವೀಕರಿಸಿ ದಾಖಲೆಗಳಲ್ಲಿ ಏನಿದೆ ಎಂಬುದನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
‘ಮಹಾಸಭಾದ ಬಹುತೇಕರ ಜನ್ಮ ದಾಖಲೆಗಳಲ್ಲಿ ಲಿಂಗಾಯತ ಎಂದೇ ನಮೂದಾಗಿದೆ. ಆದರೆ, ಸಾಫ್ಟ್ವೇರ್ನ ತಾಂತ್ರಿಕ ದೋಷದಿಂದ 1999ರಿಂದ ಈಚೆಗೆ ಮಾತ್ರ ವೀರಶೈವ ಲಿಂಗಾಯತ ಎಂದೇ ನಮೂದಾಗುತ್ತಿದೆ’ ಎಂದು ಹೇಳಿದರು.