ಬೆಂಗಳೂರು: ಸುಬ್ರಹ್ಮಣ್ಯಪುರದ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ರಜತ ಬ್ರಹ್ಮ ರಥೋತ್ಸವ ಇದೇ 23ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಬ್ರಹ್ಮ ರಥೋತ್ಸವದ ಅಂಗವಾಗಿ 20ರಿಂದ 5 ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 20ರಂದು ಬೆಳಿಗ್ಗೆ 10 ಗಂಟೆಯಿಂದ ಮೂಲದೇವತಾ ಪ್ರಾರ್ಥನೆ, ಗಣಪತಿ ಪೂಜೆ, ರುದ್ರಾಭಿಷೇಕ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆಯಲಿವೆ.
21ರಂದು ಪ್ರಾಕಾರೋತ್ಸವ, ರಾತ್ರಿ ನಿತ್ಯಹೋಮ, ತಾರಕಾಸುರ ಸಂಹಾರೋತ್ಸವ ಇರಲಿದೆ. 22ರಂದು ಕಲ್ಯಾಣೋತ್ಸವ ವಿಧಿಗಳು ಜರುಗಲಿವೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿಯವರಿಂದ ಸಂಜೆ 5ರಿಂದ 6.30ರವರೆಗೆ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
23ರಂದು ಶಾಂತ್ಯುತ್ಸವ, ಮಹಾಮಂಗಳಾರತಿ ಇರಲಿದೆ. 24ರಂದು ರುದ್ರಾಭಿಷೇಕ, ಪೂರ್ಣಾಹುತಿ, ಕಲಶೋದ್ವಾಸನಾ ಚೂರ್ಣೋತ್ಸವ, ಅವಭೃತ ತೀರ್ಥೋತ್ಸವ ಹಾಗೂ ರಾತ್ರಿ ಪುಷ್ಪಮಂಟಪ ಶಯನೋತ್ಸವ ನಡೆಯಲಿವೆ. ಅನ್ನಸಂತರ್ಪಣೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.