ಬೆಂಗಳೂರು: ವಿಶ್ವ ಆಂಬುಲೆನ್ಸ್ ದಿನಾಚರಣೆ ಅಂಗವಾಗಿ ಮಣಿಪಾಲ್ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡ ‘ದಾರಿ ಬಿಡಿ, ಜೀವ ಉಳಿಸಿ’ ಅಭಿಯಾನಕ್ಕೆ ದಕ್ಷಿಣ ಭಾರತದ ನಟಿ ಶ್ರದ್ಧಾ ಶ್ರೀನಾಥ್ ಸೋಮವಾರ ಚಾಲನೆ ನೀಡಿದರು.
‘ಅಪಘಾತದಿಂದ ಗಾಯಗೊಂಡವರನ್ನು ಹಾಗೂ ಹೃದಯಾಘಾತಕ್ಕೆ ಒಳಗಾದವರನ್ನು 1 ಗಂಟೆಯ ಒಳಗೆ ಆಸ್ಪತ್ರೆಗೆ ದಾಖಲಿಸಿದರೆ ಜೀವ ಉಳಿಯುವ ಸಾಧ್ಯತೆ ಹೆಚ್ಚು ಇರುತ್ತದೆ. ಪ್ರಾಣ ಉಳಿಸಲು ನಾವೆಲ್ಲರೂ ಶ್ರಮಿಸೋಣ’ ಎಂದು ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.
‘ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಲಿದ್ದೇವೆ. ತೀವ್ರ ನಿಗಾ ಘಟಕ (ಐಸಿಯು) ವ್ಯವಸ್ಥೆ ಹೊಂದಿರುವ 8 ಆಂಬುಲೆನ್ಸ್ಗಳು ಹಾಗೂ 18 ಸಾಮಾನ್ಯ ಆಂಬುಲೆನ್ಸ್ಗಳು ನಗರದಲ್ಲಿ ಕಾರ್ಯನಿರ್ವಹಿಸಲಿವೆ’ ಎಂದು ಅವರು ತಿಳಿಸಿದರು.
‘ತುರ್ತು ಸಂದರ್ಭದಲ್ಲಿ ಯಾರುಬೇಕಾದರೂ ಈ ಕರೆ ಮಾಡಬಹುದು. ಗಾಯಾಳುಗಳನ್ನು ನಮ್ಮ ಆಸ್ಪತ್ರೆಗೇ ಕರೆತರಬೇಕು ಎಂಬ ನಿಯಮ ಇಲ್ಲ. ಅಗತ್ಯ ಇದ್ದಾಗ ಐಸಿಯು ವ್ಯವಸ್ಥೆ ಇರುವ ಆಂಬುಲೆನ್ಸ್ ಕಳುಹಿಸುತ್ತೇವೆ’ ಎಂದರು.
ಮಣಿಪಾಲ್ ಆಂಬುಲೆನ್ಸ್ ಪ್ರತಿಕ್ರಿಯೆ ಸೇವೆಗೆ (ಮಾರ್ಸ್) ಸಂಪರ್ಕ: 080–22221111