ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಬಾಧಿತರಿಗೂ ವಿಶೇಷ ಭಾಗ್ಯ: ಮನವಿ

ಹಿರೀಸಾವೆಯಲ್ಲಿ ರಾಜ್ಯಮಟ್ಟದ ಎಚ್‌ಐವಿ ಬಾಧಿತರ ವಧು– ವರರ ಸಮ್ಮಿಲನ
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಹಿರೀಸಾವೆ: ರಾಜ್ಯ ಸರ್ಕಾರವು ಹಲವು ಭಾಗ್ಯಗಳನ್ನು ನೀಡಿದೆ. ಅದರಂತೆ ಎಚ್‌ಐವಿ ಬಾಧಿತರಿಗೂ ವಿಶೇಷ ಭಾಗ್ಯ ನೀಡುವಂತೆ ಸೋಂಕಿತರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಸ್ವಾಮಿ ವಿವೇಕಾನಂದರ 155ನೇ ಜಯಂತಿ ಪ್ರಯುಕ್ತ ಹಾಸನದ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಹಾಸನದ ಜೀವನಾಶ್ರಯ ನೆಟ್‌ವರ್ಕ್‌, ಚನ್ನರಾಯಪಟ್ಟಣದ ವೈದ್ಯ ಸ್ಕೂಲ್‌ ಆಫ್‌ ನರ್ಸಿಂಗ್, ಬೇಲೂರಿನ ಪ್ರೇರಣಾ ಸ್ವಯಂ ಸೇವಾ ಸಂಸ್ಥೆ, ಚನ್ನರಾಯಪಟ್ಟಣದ ಸ್ನೇಹಸಿಂಚನ ಸಂಸ್ಥೆ, ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಶುಕ್ರ ವಾರ ಇಲ್ಲಿ ಏರ್ಪಡಿಸಿದ್ದ ಎಚ್‌ಐವಿ ಬಾಧಿತರ ಸರ್ವ ಧರ್ಮೀಯರ ವಧು ವರರ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುತೇಕರು ವಿಶೇಷ ಭಾಗ್ಯಕ್ಕಾಗಿ ಮನವಿ ಮಾಡಿದರು.

ಎಚ್‌ಐವಿ ಇರುವವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಅಂತ ರ್ಜಾತಿ ವಿವಾಹವಾದರೆ ಸರ್ಕಾರ ಪ್ರೋತ್ಸಾಹ ಧನ ನೀಡುವಂತೆ ಎಚ್‌ಐವಿ ಸೋಂಕಿತ ಪುರುಷ, ಮಹಿಳೆ ಮದುವೆಯಾದಾಗ ಸರ್ಕಾರ ಸಹಾಯಧನ ನೀಡಬೇಕು. ಗ್ರಾಮ ಪಂಚಾಯಿತಿ ಸೇರಿದಂತೆ ಸರ್ಕಾರವನ್ನು ಸೋಂಕಿತರು ನೇರವಾಗಿ ಸೌಲಭ್ಯಗಳನ್ನು ಕೇಳಲು ಸಾಧ್ಯವಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ನೆಟ್‌ವರ್ಕ್‌ ಪೀಪಲ್‌ (ಕೆಎನ್‌ಪಿ+) ಮೂಲಕ ಸೌಲಭ್ಯಗಳನ್ನು ಒದಗಿಸುವಂತೆ ಕೇಳಿದರು.

‘ಎಚ್‌ಐವಿ ಸೋಂಕು ತಗುಲಿದ ನಂತರ 21 ವರ್ಷದವರೆಗೆ ಬದುಕು ನಡೆಸಿದ್ದೇವೆ. ಪತಿ ಮೃತಪಟ್ಟು 19 ವರ್ಷಗಳಾದವು. ಅಂದಿನಿಂದ ಎಚ್‌ಐವಿ ಬಾಧಿತರ ಪರವಾಗಿ ಕೆಲಸ ಮಾಡುತ್ತಿದ್ದೇನೆ, ಎಚ್‌ಐವಿ ಸೋಂಕಿ ತರನ್ನೇ ಪತ್ತೆ ಮಾಡಿ, 22 ವಿವಾಹಗಳನ್ನು ಇದುವರೆಗೆ ಮಾಡಿಸಿದ್ದೇನೆ.ಎಲ್ಲರೂ ಚೆನ್ನಾಗಿದ್ದಾರೆ’ ಎಂದು ಸೋಂಕಿತೆಯೊಬ್ಬರು ವಿವರಿಸಿದರು.

‘ನಾನು ಎಂ.ಕಾಂ ಪದವೀಧರ, ರಕ್ತದಾನ ಮಾಡುವಾಗ ಸೋಂಕು ಇರುವುದು ಪತ್ತೆಯಾಯಿತು. ಇದು ಹೇಗೆ ಬಂತು ಎಂಬುದು ಇದುವರೆಗೆ ನನಗೆ ಗೊತ್ತಿಲ್ಲ. ಎಲ್ಲರಂತೆ ಬದುಕಲು ಸೌಲಭ್ಯಗಳನ್ನು ನೀಡಿ’ ಎಂದು ಯುವಕ ರೊಬ್ಬರು ಮನವಿ ಮಾಡಿದರು.

‘ಎಚ್‌ಐವಿ ಸೋಂಕಿತರು, ಸೋಂಕಿ ತರನ್ನು ವಿವಾಹ ಆಗುವ ಮೂಲಕ ಬೇರೆಯವರಿಗೆ ಹರಡುವುದನ್ನು ತಡೆಗಟ್ಟಬಹುದು. ನಾನು ಸೋಂಕು ಇರುವ ಮಹಿಳೆಯನ್ನು ಮದುವೆಯಾಗಿದ್ದೇನೆ’ ಎಂದು 40 ವರ್ಷದ ವ್ಯಕ್ತಿಯೊಬ್ಬರು ಹೇಳಿದರು.

‘ವೈದ್ಯ ಮತ್ತು ಕೆಎಎಸ್‌ ಅಧಿಕಾರಿ ಒಬ್ಬರಿಗೆ ಎಚ್‌ಐವಿ ಸೋಂಕು ಇರುವುದು ಪತ್ತೆಯಾಯಿತು. ಆಪ್ತ ಸಮಾಲೋಚನೆ ಮಾಡುವಾಗ ಸೋಂಕು ಇಲ್ಲದ ಯುವತಿಯನ್ನು ಮದುವೆಯಾಗಿ ಅವರ ಜೀವನ ಹಾಳು ಮಾಡಲು ಇಷ್ಟ ಇಲ್ಲ. ಎಚ್‌ಐವಿ ಇರುವ ಮಹಿಳೆಯರು ಇದ್ದರೆ ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಇವರ ಪ್ರೇರಣೆಯಿಂದ ರಾಜ್ಯಮಟ್ಟದ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಿದ್ದಾಗಿ’ ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಮೇಲ್ವಿಚಾರಕ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

***

234 ಜನರು ದೂರವಾಣಿಯಲ್ಲಿ ಹೆಸರು ನೋಂದಾಯಿಸಿದ್ದವರು

68 ಜನರು ಸಮ್ಮಿಲನದಲ್ಲಿ ಭಾಗವಹಿಸಿದ್ದವರು (58 ಪುರುಷರು, 10 ಸ್ತ್ರೀಯರು)

5ಜೋಡಿವಿವಾಹಕ್ಕೆ ಒಪ್ಪಿಗೆ ನೀಡಿದವರು

21ರಿಂದ 60ವಯಸ್ಸಿನವರು ಮದುವೆಯ ಆಕಾಂಕ್ಷಿಗಳಾಗಿ ಪಾಲ್ಗೊಂಡವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT