ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ತಾನದ 7 ಯೋಧರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಶನಿವಾರ ಪಾಕಿಸ್ತಾನದ ಯೋಧರು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಪಡೆಗಳತ್ತ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಭಾರತದ ಒಬ್ಬ ಯೋಧ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸೋಮವಾರ ಪಾಕಿಸ್ತಾನಿ ಪಡೆಗಳತ್ತ ದಾಳಿ ನಡೆಸಿದೆ.
‘ಪೂಂಛ್ ಜಿಲ್ಲೆಯ ಮೇಂಧರ್ ಸೆಕ್ಟರ್ನ ಜಗ್ಲೋಟ್ ಪ್ರದೇಶದಲ್ಲಿ ಸೇನೆ ಪ್ರತಿದಾಳಿ ನಡೆಸಿದೆ’ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ 70ನೇ ಸೇನಾ ದಿನ ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರತಿ ದಾಳಿ ನಡೆಸಲಾಗಿದೆ.