ಹುಬ್ಬಳ್ಳಿ: ಈಗಾಗಲೇ ವಿಶ್ವ ಲಿಂಗಾಯತ ಪರಿಷತ್ ಹೆಸರಿನಲ್ಲಿ ಸಂಸ್ಥೆ ಅಸ್ತಿತ್ವದಲ್ಲಿರುವುದರಿಂದ ಮತ್ತೆ ಅದೇ ಹೆಸರಿನಲ್ಲಿ ಪರಿಷತ್ ರಚಿಸಬಾರದು. ಅದೇ ಹೆಸರಿನಲ್ಲಿ ರಚಿಸಲು ಮುಂದಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ರಾಜಶೇಖರ ಕುಬುಸದ ಎಚ್ಚರಿಸಿದ್ದಾರೆ.
‘ಮೂರು ವರ್ಷದಿಂದ ಹುಬ್ಬಳ್ಳಿಯಲ್ಲಿ ಸಂಸ್ಥೆ ಅಸ್ತಿತ್ವದಲ್ಲಿದೆ. ಸಮಾಜದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಬೇರೆ ಹೆಸರು ಇಟ್ಟುಕೊಳ್ಳಿ ಎಂದು ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಸಂಚಾಲಕ ಎಸ್.ಎಂ. ಜಾಮದಾರ ಅವರಿಗೆ ಜ.13ರಂದು ದೂರವಾಣಿ ಮೂಲಕ ತಿಳಿಸಿದ್ದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದ ಜಾಮದಾರ ಅವರು, ಜ.14 ರಂದು ಮತ್ತೆ ಅದೇ ಹೆಸರಿನಲ್ಲಿ ಸಂಸ್ಥೆ ಆರಂಭಿಸುವುದಾಗಿ ಘೋಷಿಸಿ ಕಾನೂನು ಉಲ್ಲಂಘಿಸಿದ್ದಾರೆ. ಬೇರೆ ಹೆಸರಿನಲ್ಲಿ ಸಂಸ್ಥೆ ಆರಂಭಿಸುವ ಬಗ್ಗೆ ಕೂಡಲೇ ಪ್ರಕಟಿಸಬೇಕು’ ಎಂದು ಆಗ್ರಹಿಸಿದ್ದಾರೆ.