ಯಾದಗಿರಿ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಗುರುವಾರ ಬೆಳಿಗ್ಗೆ ಇಲ್ಲಿನ ರೈಲು ನಿಲ್ದಾಣದಲ್ಲಿ ಉದ್ಯಾನ ಎಕ್ಸ್ಪ್ರೆಸ್ ರೈಲುಗಾಡಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಇದಕ್ಕೂ ಮೊದಲು ರೈಲು ನಿಲ್ದಾಣಕ್ಕೆ ಪೊಲೀಸರು ಬ್ಯಾರಿಕೆಡ್ ಮೂಲಕ ರಕ್ಷಣೆ ಒದಗಿಸಿದ್ದರು. ಬ್ಯಾರಿಕೆಡ್ ದಾಟಲು ಯತ್ನಿಸಿದ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಂತರ ರೈಲುಗಾಡಿ ನಿಲ್ದಾಣಕ್ಕೆ ಬರುತ್ತಿದ್ದಂತೆ ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ಬ್ಯಾರಿಕೆಡ್ ಮೇಲಿಂದ ಜಿಗಿದು ರೈಲುಗಾಡಿ ತಡೆದು ಪ್ರತಿಭಟನೆ ತೀವ್ರಗೊಳಿಸಿದರು. ತಕ್ಷಣ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ದರು.
ಉಳಿದಂತೆ ನಗರದಲ್ಲಿ ಯಾವುದೇ ಅಂಗಡಿ ಮುಚ್ಚಿಲ್ಲ. ಬಸ್ ಸಂಚಾರ ಎಂದಿನಂತೆ ಇದೆ.
ರೈಲು ನಿಲ್ದಾಣಕ್ಕೆ ಮುತ್ತಿಗೆ ಪ್ರಯತ್ನ
ಹುಬ್ಬಳ್ಳಿ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ನಗರ ಕೇಂದ್ರ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕುವುದನ್ನು ಆರ್ಪಿಎಫ್ ಪೊಲೀಸರು ತಡೆದು ಹೊರ ಕಳುಹಿಸಿದರು.
ಮುಂಜಾಗ್ರತಾ ಕ್ರಮವಾಗಿ ರೈಲು ನಿಲ್ದಾಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
ಶಿರಸಿಯಲ್ಲಿ ಸಹಜ ಸ್ಥಿತಿ
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದಿನಂತೆ ಬಸ್ ಸಂಚಾರ ಮುಂದುವರಿದಿದೆ. ಮಕ್ಕಳು ಶಾಲೆ, ಕಾಲೇಜಿಗೆ ಹೋಗುತ್ತಿದ್ದಾರೆ.
'ಜಿಲ್ಲೆಯ ಎಲ್ಲ ತಾಲ್ಲೂಕುಗಳು, ಗ್ರಾಮೀಣ ಭಾಗಕ್ಕೆ ಬಸ್ ಗಳು ಸಂಚಾರ ಮಾಡುತ್ತಿವೆ. ಹುಬ್ಬಳ್ಳಿ ಕಡೆಗೆ ಹೋಗುವ ಬೆಳಗಿನ ಬಸ್ ಗಳನ್ನು ಬಿಡಲಾಗಿದೆ. ಇನ್ನು ಮೇಲೆ ಹೊರ ಜಿಲ್ಲೆಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ಬಸ್ ಬಿಡಲಾಗುವುದು' ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣಿ ಎಂದಿನಂತೆ ಇಲ್ಲ
ಹೊಸಪೇಟೆ: ಕರ್ನಾಟಕ ರಕ್ಷಣಾ ವೇದಿಕೆ ಯುವಶಕ್ತಿ ಕಾರ್ಯಕರ್ತರು ರೈಲು ತಡೆದು ಪ್ರತಿಭಟನೆ ನಡೆಸಿದರು.