ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲುಮೆಸ್ವಾಮಿಯ ರಥೋತ್ಸವ ಇಂದು

ಪ್ರತಿ ಮನೆಯಲ್ಲೂ ಚೆಲುಮೆಪ್ಪ, ಚೆಲುಮೇಶ , ಚೆಲುವಮ್ಮ ಹೆಸರಿನವರು
Last Updated 26 ಜನವರಿ 2018, 8:44 IST
ಅಕ್ಷರ ಗಾತ್ರ

ಪರಶುರಾಂಪುರ: ‌ನಾಗ ಗೊಂಡನಹಳ್ಳಿಯ ಚೆಲುಮೆಸ್ವಾಮಿಯ ರಥೋತ್ಸವ 26ರಂದು ವಿಜೃಂಭಣೆಯಿಂದ ನಡೆಯಲಿದ್ದು, ಸಕಲ ಸಿದ್ಧತೆಯನ್ನು ನಡೆಸಲಾಗಿದೆ.

27ಕ್ಕೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವ, 28 ರಾಸುಗಳಿಂದ ಕಲ್ಲು ಕಂಬಗಳನ್ನು ಎಳೆಯುವುದು. 29 ಮಹಾಮಂಗಳಾರತಿ. ರಾತ್ರಿ ಜಾಜೂರು ಗ್ರಾಮದಲ್ಲಿ ಮೆರವಣಿಗೆ ಇರಲಿದೆ.

ಐತಿಹ್ಯ: ಐದು ನೂರು ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿದ್ದ ಪಂಚ ಅಂಗಗಳು ಎಂದೇ ಕರೆಯುತ್ತಿದ್ದ ನಾಗಗೊಂಡನಹಳ್ಳಿಯ ಚೆಲುಮೆಸ್ವಾಮಿ, ನಾಯಕನಹಟ್ಟಿಯ ತಿಪ್ಪೇಸ್ವಾಮಿ, ಉಕ್ಕಡಗಾತ್ರಿಯ ಕರಿಬಸ ಅಜ್ಜಯ್ಯ, ಚೇಳು ಗುರ್ಕಿ ಸ್ವಾಮಿ, ರಾಯದುರ್ಗದ ಮದ್ದನ ಸ್ವಾಮಿ ಅವರು ವಿಜಯ ನಗರದಿಂದ ಹೊರಟು ಕರ್ನಾಟಕ ಮತ್ತು ಆಂಧ್ರದ ಐದು ಕಡೆ ವಿವಿಧ ಪವಾಡಗಳನ್ನು ಸೃಷ್ಟಿಸಿದ್ದರು.

ಚೆಲುಮೆಸ್ವಾಮಿ ವೇದಾವತಿ ನದಿ ತೀರದ ನಾಗಗೊಂಡನಹಳ್ಳಿಯಲ್ಲಿ ಈಶ್ವರ ದೇವಸ್ಥಾನದಲ್ಲಿ ದೇವರ ಪೂಜೆ ಮಾಡುತ್ತಿದ್ದರು. ವೇದಾವತಿ ನದಿ ದಡದಲ್ಲಿ ದನ ಕಾಯುವರು ಪ್ರತಿ ದಿನ ದೇವಸ್ಥಾನದ ಬಳಿ ಬಂದು ಅಲ್ಲಿರುವ ಚೆಲುಮೆಸ್ವಾಮಿಗೆ ಹಾಲು ನೀಡುತ್ತಿದ್ದರು. ಹಾಲು ಬಿಟ್ಟರೆ ಸ್ವಾಮಿ ಬೇರೆ ಯಾವುದೇ ವಸ್ತುವನ್ನು ಸ್ವೀಕರಿಸುತ್ತಿರಲ್ಲಿ.

ಸ್ವಾಮಿ ಜೀವಂತ ಸಮಾಧಿಯಾದರೂ ದನ ಕಾಯುತ್ತಿದ್ದ ಓಬಜ್ಜ ಎಂಬುವವರು ದಿನಲೂ ಹಾಲನ್ನು ತಂದು ಅವರ ಸಮಾಧಿಯ ಮೇಲೆ ಇಡುತ್ತಿದ್ದರಂತೆ. ಸ್ವಾಮಿ ನಾಗರ ಹಾವಿನ ರೂಪದಲ್ಲಿ ಬಂದು ಹಾಲು ಸೇವಿಸಿ ಹೋಗುತ್ತಾರೆ ಎಂಬ ನಂಬಿಕೆ ಇಗಲೂ ಈ ಭಾಗದ ಜನರಲ್ಲಿ ಇದೆ.

ಚೆಲುಮೆಸ್ವಾಮಿ ಪವಾಡ: ದನ ಕಾಯುತ್ತಿದ್ದ ಜನರು ಸ್ವಾಮಿಗೆ ಹಾಲನ್ನು ಕೊಟ್ಟರೆ ಅದಕ್ಕೆ ಪ್ರತಿಯಾಗಿ ಬೆತ್ತದ ಮೂಲಕ ಮರಳು ಕುಪ್ಪೆಯನ್ನ ತಾಗಿಸಿ ಪ್ರಸಾದವನ್ನಾಗಿ ಮಾಡು ತ್ತಿದ್ದರು. ಅದನ್ನೂ ದನ ಕಾಯುವವರು ತಿಂದು ಹಸಿವನ್ನು ನೀಗಿಸಿಕೊಳ್ಳುತ್ತಿದ್ದರು. ಹೀಗೆ ಪವಾಡ ಮಾಡುತ್ತಿದ್ದ ಚೆಲುಮೆಸ್ವಾಮಿಯನ್ನು ಸುತ್ತಮುತ್ತಲ ಹಳ್ಳಿಯವರು ಇಂದಿಗೂ ಭಕ್ತಿಯಿಂದ ಪೂಜಿಸುತ್ತಾರೆ. ಜತೆಗೆ ಈ ಭಾಗದ ಪ್ರತಿ ಮನೆಯಲ್ಲೂ ಈ ಚೆಲುಮಪ್ಪ, ಚೆಲುಮೇಶ, ಚೆಲುಮೆ ರುದ್ರಪ್ಪ,ಚೆಲುವಮ್ಮ, ಚೆಲುಮೆ ರುದ್ರಮ್ಮ ಹೆಸರು ಇಡುವ ಸಂಪ್ರಾದಾಯವನ್ನ ರೂಢಿಸಿ ಕೊಂಡಿದ್ದಾರೆ.

ಭಕ್ತರ ಇಷ್ಟಾರ್ಥ ನೆರವೇರಿಸುವ ದೇವರಾಗಿ ಈ ಭಾಗದಲ್ಲಿ ಚಲುಮೆರುದ್ರಸ್ವಾಮಿ ಜನಪ್ರಿಯರಾಗಿದ್ದಾರೆ. ಕರಿಕೆರೆಯ ಗೌರಮ್ಮ ಎಂಬುವವರು   ಗಂಡನ ಆಸ್ತಿ ಪಡೆಯಲು ಬಹಳಷ್ಟು ಹೋರಾಟ ಮಾಡಿ ಕೊನೆಗೆ ಈ ದೇವರಿಗೆ ಹರಕೆ ಮಾಡಿಕೊಂಡರಂತೆ. ಹರಕೆಯಂತೆ  ಆಸ್ತಿ ಇವರಿಗೆ ಒಲಿದು ಬಂದು ದೇವಸ್ಥಾನದ ಗೋಪುರವನ್ನು ನಿರ್ಮಿಸಿದ್ದರು. ಜಾಜೂರಿನ ಬಸವರಾಜ ಎನ್ನುವವರಿಗೆ ಎರಡು ಕಣ್ಣು ಕಾಣದಂತಾಯಿತು. ಮತ್ತೆ ಕಣ್ಣು ಕಂಡರೆ ದೇವರಿಗೆ ಗದ್ದುಗೆ ಮಾಡಿಸುತ್ತೇವೆ ಎಂದು ಹರಕೆ ಹೊತ್ತಿದ್ದರಿಂದ ಎರಡು ಕಣ್ಣು ಮತ್ತೆ ಕಾಣುವಂತಾಯಿತು ಎಂಬುದು ಈ ಭಾಗದಲ್ಲಿ ಪ್ರಚಲಿತದಲ್ಲಿರುವ ನಂಬಿಕೆ.

ಜಿಲ್ಲಾ ಸದಸ್ಯರಾದ ಚಂದ್ರಿಕಾ ಶ್ರೀನಿವಾಸ, ಅನ್ನಸಂತರ್ಪಣೆ ಸೇವೆಯನ್ನು ನೀಡಿದ್ದಾರೆ. ಈ ಭಾಗದ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶಿವಮ್ಮ ಕರಿಯಣ್ಣ, ಉಮಾ ಜನಾರ್ದನ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಭೀಮಕ್ಕ, ಭೀಮಣ್ಣ, ಹಾಗೂ ಎಪಿಎಂಸಿ ಸದಸ್ಯರಾದ ಚನ್ನಕೇಶವ, ಹಾಗೂ ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷರಾದ ಓಬಳೇಶಪ್ಪ, ಕಾರ್ಯದರ್ಶಿ ಬೊಮ್ಮಯ್ಯ, ಸಹ ಕಾರ್ಯದರ್ಶಿ ರವಿಕುಮಾರ  ದೇವಸ್ಥಾನದ ಆವರಣದಲ್ಲಿ ಮೂಲಸೌಲಭ್ಯವನ್ನು ಒದಗಿಸುವ ಕೆಲಸ ಮಾಡಿದ್ದಾರೆ.

-ಜೆ. ತಿಮ್ಮಯ್ಯ ಪರಶುರಾಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT