ಹಾವೇರಿ: ಸಾರಿಗೆ ಸಂಸ್ಥೆಯ ಕಾರ್ಮಿಕರು ಮತ್ತು ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ಜ.30ರೊಳಗಾಗಿ ಸಭೆ ಕರೆದು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ (ಎ.ಐ.ಟಿ.ಯು.ಸಿ.) ವತಿಯಿಂದ ಗುರುವಾರ ನಗರದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೊ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.
ಯೂನಿಯನ್ನ ಹಾವೇರಿ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಜಟ್ಟಿ ಮಾತನಾಡಿ, ‘ಸರ್ಕಾರವು ನಮ್ಮ ಬೇಡಿಕೆಗಳ ಕುರಿತು ಯೂನಿಯನ್ ರಾಜ್ಯ ನಾಯಕರನ್ನು ಕರೆದು ಮಾತುಕತೆ ನಡೆಸಬೇಕು. ಇಲ್ಲದಿದ್ದಲ್ಲಿ ಜ.30ರಂದು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತ ಸುಬ್ಬರಾವ್ ಹಾಗೂ ಎಐಯುಟಿಸಿ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದರು.
ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ಆರ್. ಸಾವುಕಾರ ಮತ್ತು ಅಧ್ಯಕ್ಷ ಜೆ.ಪಿ ಮಠದ ಮಾತನಾಡಿ, ‘ನಿಗಮದಿಂದ ನಿಗಮಕ್ಕೆ ವರ್ಗಾವಣೆ ನೀಡಬೇಕು. ಸಾರಿಗೆ ನಿಗಮಗಳ ಸಾಮಾಜಿಕ ಹೊಣೆಗಾರಿಕೆ ಖರ್ಚನ್ನು ಸರ್ಕಾರವೇ ಭರಿಸಬೇಕು. ಈ ಪೈಕಿ ಹಾವೇರಿ ವಿಭಾಗಕ್ಕೆ ₹ 68.10 ಕೋಟಿ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದರು.
ಮೋಟಾರು ವಾಹನ ತೆರಿಗೆಯನ್ನು ಶಾಶ್ವತವಾಗಿ ತೆಗೆಯಬೇಕು. ನಾಲ್ಕು ಸಾರಿಗೆ ನಿಗಮವನ್ನು ಒಂದೇ ಮಾಡಬೇಕು. ಹೆಚ್ಚುವರಿ ದುಡಿಮೆಗೆ ಭತ್ಯೆ ನೀಡಬೇಕು. ಎನ್.ಐ.ಎನ್.ಸಿ. ಪ್ರಕರಣಗಳಲ್ಲಿ ನಿರ್ವಾಹಕರಿಗೆ ಶಿಕ್ಷೆ ನೀಡಬಾರದು. ಯೂನಿಯನ್ ಕಾರ್ಯಕರ್ತರ ಅಕ್ರಮ ವರ್ಗಾವಣೆ ರದ್ದು ಮಾಡಬೇಕು. ಕಾರ್ಮಿಕರ ವೇತನ, ರಜಾ ಭತ್ಯೆ , ವೈದ್ಯಕೀಯ ಭತ್ಯೆ, ನಿವೃತ್ತರ ಗ್ರ್ಯಾಚ್ಯುಟಿ, ಭವಿಷ್ಯ ನಿಧಿ ಬಾಕಿಯನ್ನು ಕೂಡಲೇ ನೀಡಬೇಕು. ಬೋನಸ್ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.