ಶಿಗ್ಗಾವಿ: ‘ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡಬೇಕಾದ ಸರ್ಕಾರಗಳಿಂದಲೇ ಜಾತಿ ವ್ಯವಸ್ಥೆ ಸೃಷ್ಟಿಯಾಗುತ್ತಿದೆ’ ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬ್ರಾಹ್ಮಣ ಸಮಾಜ ಇತ್ತೀಚಗೆ ಆಯೋಜಿಸಿದ್ದ ‘ಗುರು ವಂದನೆ ಮತ್ತು ಗುರುಪುರ ಪ್ರವೇಶ ಸಮಾರಂಭ’ದಲ್ಲಿ ಆಶೀರ್ವಚನ ಅವರು ಮಾತನಾಡಿದರು.
‘ರಾಜಕೀಯ ಪಕ್ಷಗಳು ಮತ ಪಡೆಯು ಆಸೆಗಾಗಿ ಮುಗ್ದ ಜನತೆಯಲ್ಲಿ ಜಾತಿ ವ್ಯವಸ್ಥೆ ಹುಟ್ಟು ಹಾಕುತ್ತಿವೆ’ ಎಂದು ದೂರಿದರು. ‘ದೇಶದ ಅಭಿವೃದ್ಧಿಗೆ ಸಾಮರಸ್ಯ ಮೂಡಬೇಕಿದೆ. ನಾವೆಲ್ಲಾ ಒಂದು ಎಂಬ ಭಾವನೆ ಮೂಡಿದಾಗ ದೇಶದ ಏಳಿಗೆ ಸಾಧ್ಯ’ ಎಂದು ಸಲಹೆ ನೀಡಿದರು.
ಸಮಾರಂಭದ ಪೂರ್ವದಲ್ಲಿ ಶ್ರೀಗಳನ್ನು ವಿವಿಧ ವಾದ್ಯ ಮೇಳ, ಪೂರ್ಣಕುಂಬ ಮೇಳದೊಂದಿಗೆ ಪಟ್ಟಣದ ಅಂಚೆ ಕಚೇರಿ ವೃತ್ತದಿಂದ ಶೋಭಾಯಾತ್ರೆ ಮೂಲಕ ದೇಸಾಯಿ ಗಲ್ಲಿ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಶ್ರೀಗಳ ಪಾದಪೂಜೆ, ಮುದ್ರಾಧಾರಣೆ, ಮೂಲ ರಾಮದೇವರ ವಿಶೇಷ ಪೂಜೆ, ಮಹಾಪ್ರಸಾದ ಕಾರ್ಯಕ್ರಮ ನಡೆಯಿತು.
ಮುಖಂಡ ಆರ್.ಆರ್.ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ, ಟಿ.ವಿ.ದೇಶಪಾಂಡೆ, ಬೋಧರಾವ್ ಬೆಳಗಲಿ, ಜಯಣ್ಣ ಕುಲಕರ್ಣಿ, ಪ್ರಹ್ಲಾದರಾವ್ ಬೆಳಗಲಿ, ಎಂ.ಎಲ್.ದೇಶಪಾಂಡೆ, ಕೆ.ಜಿ.ಹುರಳಿಕೊಪ್ಪಿ, ಎಸ್.ಪಿ. ಜೋಷಿ ಇದ್ದರು.