ಜಗಳೂರು: 'ನಾವು ವೀರಶೈವರೂ ಅಲ್ಲ, ಹಿಂದೂಗಳೂ ಅಲ್ಲ. ನಾವು ಲಿಂಗಾಯತರು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಸ್ಪಷ್ಟಪಡಿಸಿದರು.
ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ‘ಕೆಲವರು, ಸಿರಿಗೆರೆ ಮಠ ವಿರಶೈವ ಅಥವಾ ಲಿಂಗಾಯತರೋ ಎಂಬ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಈ ಬಗ್ಗೆ ತಮ್ಮ ಲೇಖನಗಳಲ್ಲಿ, ಅಂಕಣಗಳಲ್ಲಿ ಸ್ಪಷ್ಟಪಡಿಸಿದ್ದಾರೆ’ ಎಂದರು.
‘ಲಿಂಗಾಯತವೇ ನಮ್ಮ ಧರ್ಮ, ವಚನಗಳೇ ಧರ್ಮ ಗ್ರಂಥ, ಇಷ್ಟಲಿಂಗವೇ ಲಾಂಛನವಾಗಿದೆ. 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ವತಂತ್ರವಾಗಿದೆ. ಲಿಂಗಾಯತ ಪ್ರತ್ಯೇಕವಾದ ಧರ್ಮವಾದಲ್ಲಿ ಶಿಕ್ಷಣ, ಉದ್ಯೋಗ ಮೀಸಲಾತಿ ದೊರೆತು, ಸಮಾಜಕ್ಕೆ ಲಾಭವಾಗಲಿದೆ’ ಎಂದು ಸ್ವಾಮೀಜಿ ಹೇಳಿದರು.
ಮದ್ಯಪಾನ ನಿಷೇಧಿಸುವವರ ಬೆಂಬಲಿಸಿ
ಚುನಾವಣಾ ಪ್ರಣಾಳಿಕೆಯಲ್ಲಿ ಮದ್ಯಪಾನ ನಿಷೇಧಿಸುವ ಭರವಸೆಯನ್ನು ನೀಡುವ ಪಕ್ಷಗಳಿಗೆ ಮತ ನೀಡಬೇಕು. ಆದರೆ, ಮದ್ಯಪಾನ ನಿಷೇಧಿಸುವ ಭರವಸೆಯನ್ನು ಯಾವುದೇ ಪಕ್ಷಗಳು ಕೊಡದಿರುವುದು ವಿಪರ್ಯಾಸ ಎಂದು ಸ್ವಾಮೀಜಿ ವಿಷಾದಿಸಿದರು.