ನವದೆಹಲಿ: ಎದುರಾಳಿಗಳ ಮೇಲೆ ಆಧಿಪತ್ಯ ಸ್ಥಾಪಿಸಿದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಕಿದಂಬಿ ಶ್ರೀಕಾಂತ್ ಕೂಡ ಮೊದಲ ಸುತ್ತಿನಲ್ಲಿ ಜಯ ಗಳಿಸಿದರು.
ಬುಧವಾರ ನಡೆದ ಪಂದ್ಯಗಳಲ್ಲಿ ಸಿಂಧು ಮತ್ತು ಸೈನಾ ಕ್ರಮವಾಗಿ ಡೆನ್ಮಾರ್ಕ್ನ ನಥಾಲಿಯಾ ಕೊಚ್ ರೋಹಡೆ ಮತ್ತು ಸೋಫಿ ಹಾಲ್ಬೊ ದಾಹ್ಲ್ ಅವರನ್ನು ಮಣಿಸಿದರು. ಹಾಲಿ ಚಾಂಪಿಯನ್ ಸಿಂಧು 21–10, 21–13ರಿಂದ ಗೆದ್ದರೆ ಸೈನಾ 21–15, 21–9ರಿಂದ ಪ್ರತಿಸ್ಪರ್ಧಿಯನ್ನು ಮಣಿಸಿದರು.
ಹಾಂಕಾಂಗ್ನ ಲೀ ಚುಕ್ ಯೂ ವಿರುದ್ಧದ ಪಂದ್ಯದಲ್ಲಿ ಶ್ರೀಕಾಂತ್ 21–17, 21–18ರಿಂದ ಗೆದ್ದರು.
ಪ್ರಣಯ್ಗೆ ಪಾದದಲ್ಲಿ ಗಾಯ
ಪಾದದ ಗಾಯದಿಂದ ಬಳಲಿದ ಎಚ್.ಎಸ್.ಪ್ರಣಯ್ಗೆ ಪಂದ್ಯದಲ್ಲಿ ಉತ್ತಮವಾಗಿ ಆಡಲು ಸಾಧ್ಯವಾಗಲಿಲ್ಲ. ಅದರಿಂದಾಗಿ ಶ್ರೇಯಾಂಶು ಜೈಸ್ವಾಲ್ ವಿರುದ್ಧದ ಪಂದ್ಯದಲ್ಲಿ 4–21, 6–21ರಿಂದ ಸೋತರು.
‘ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ನ ಹೊಸ ನಿಯಮಾವಳಿ ಪ್ರಕಾರ ಅಗ್ರಕ್ರಮಾಂಕದ 15 ಮಂದಿ ಆಟಗಾರರು ವರ್ಷದಲ್ಲಿ ಕನಿಷ್ಠ 12 ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕಾಗಿದೆ. ಗಾಯದ ಸಮಸ್ಯೆ ಇದ್ದರೂ ಈ ಕಾರಣದಿಂದಲೇ ಪಂದ್ಯದಲ್ಲಿ ಆಡಿದೆ’ ಎಂದು ಪ್ರಣಯ್ ಹೇಳಿದರು.
‘ಮಲೇಷ್ಯಾ ಮತ್ತು ಇಂಡೊನೇಷ್ಯಾದಲ್ಲಿ ನಡೆದ ಸೂಪರ್ ಸರಣಿಗಳಲ್ಲಿ ಆಡಲು ಆಗಲಿಲ್ಲ. ಆದ್ದರಿಂದ ಇಲ್ಲಿ ಅಡಲೇಬೇಕಾಯಿತು. ಪಾದದ ಎರಡು ಮೂರು ಕಡೆಗಳಲ್ಲಿ ಗಾಯಗಳಾಗಿವೆ. ವೈದ್ಯರ ಬಳಿಗೆ ಹೋಗಿದ್ದೆ. ಆದರೆ ಅವರು ಸರಿಯಾದ ಚಿಕಿತ್ಸೆ ನೀಡಲಿಲ್ಲ’ ಎಂದು ಪ್ರಣಯ್ ಹೇಳಿದರು.