ನವದೆಹಲಿ: ‘ಬಿಜೆಪಿಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಕೈಜೋಡಿಸುತ್ತೇವೆ’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದರು.
ಪಕ್ಷದ ಸಂಸದಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ರಾಜಕೀಯ ಲಾಭ ಪಡೆಯಲು ಕೇಂದ್ರ ಸರ್ಕಾರ ಸಮಾಜವನ್ನು ಧ್ರುವೀಕರಣ ಮಾಡುತ್ತಿದೆ. ಅಲ್ಪಸಂಖ್ಯಾತರ ಮೇಲೆ ಹಿಂಸೆಯನ್ನು ಪ್ರಚೋದಿಸುತ್ತಿದೆ. ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಈ ವಾತಾವರಣ ಕಾಣುತ್ತಿದೆ’ ಎಂದು ಆರೋಪಿಸಿದರು.
‘ಪಕ್ಷವನ್ನು ಬಲಪಡಿಸಲು ಹೊಸ ಅಧ್ಯಕ್ಷರಾದ ರಾಹುಲ್ ಗಾಂಧಿಯೊಂದಿಗೆ ಶ್ರದ್ಧೆ, ವಿಧೆಯತೆ ಮತ್ತು ಉತ್ಸಾಹದಿಂದ ಕೆಲಸ ಮಾಡಿ’ ಎಂದು ಸಂಸದರಿಗೆ ಸಲಹೆ ನೀಡಿದ ಅವರು, ‘ರಾಹುಲ್ ಈಗ ನನ್ನ ಬಾಸ್ ಕೂಡ ಆಗಿದ್ದಾರೆ’ ಎಂದರು.
‘ಹೊಸ ನಾಯಕತ್ವದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸಂಸತ್ತಿನಲ್ಲಿ ಪ್ರಧಾನಿ ಮೋದಿ ಬುಧವಾರ ಮಾಡಿದ ಭಾಷಣ ಉಲ್ಲೇಖಿಸಿದ ಅವರು, ‘ಮೋದಿ ಸರ್ಕಾರ ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುವುದಿಲ್ಲ’ ಎಂದರು.