ಹುಬ್ಬಳ್ಳಿ: ಬಾಗಲಕೋಟೆ, ವಿಜಯಪುರ, ಬಳ್ಳಾರಿ ಹಾಗೂ ಗದಗ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಗುಡುಗು, ಬಿರುಗಾಳಿ, ಆಲಿಕಲ್ಲು ಸಹಿತ ಬಿರುಸಿನ ಮಳೆಯಾಗಿದೆ.
ಗದಗ ಜಿಲ್ಲೆ ಡಂಬಳ ಸುತ್ತಮುತ್ತ ಕಟಾವಿಗೆ ಬಂದಿದ್ದ ಜೋಳ ಮತ್ತು ಹತ್ತಿ ಬೆಳೆ, 20ಕ್ಕೂ ಹೆಚ್ಚು ಇಟ್ಟಿಗೆ ಬಟ್ಟಿಗಳು ಹಾನಿಗೀಡಾಗಿವೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕು ಮಸಬಿನ ಹಾಳದಲ್ಲಿ ಆಲಿಕಲ್ಲು ಮಳೆಯಾಗಿದ್ದು ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗೆ ಹಾನಿಯಾಗಿದೆ. ಆಲಮಟ್ಟಿ, ನಿಡಗುಂದಿಯಲ್ಲಿ ಮಧ್ಯಾಹ್ನವೇ ಆರಂಭವಾದ ಮಳೆ ಸಂಜೆ ವೇಳೆಗೆ ಬಿರುಸಾಗಿ ಸುರಿದಿದೆ. ಸಮೀಪದ ವಂದಾಲ, ಬೇನಾಳದಲ್ಲಿ ಆಲಿಕಲ್ಲು ಸಹಿತ ಅರ್ಧತಾಸು ಮಳೆಯಾಗಿದೆ.
ಬಾಗಲಕೋಟೆ ಹಾಗೂ ಬೀಳಗಿ
ಯಲ್ಲಿ ಬಿರುಸಿನ ಮಳೆಯಾಗಿದ್ದು, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಕೊಟ್ಟೂರಿನಲ್ಲಿ ಸಾಧಾರಣ ಮಳೆ ಅಗಿದೆ. ಗದುಗಿನಲ್ಲಿ ಶನಿವಾರ ತಡರಾತ್ರಿ ಮಳೆ ಸುರಿದಿದೆ.
ಹಲವೆಡೆ ಮಳೆ
ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಸೋಮವಾರಪೇಟೆ, ಚಿಕ್ಕಮಗಳೂರು, ನಾಯಕನಹಟ್ಟಿ, ಬುಕ್ಕಪಟ್ಟಣ ಹಾಗೂ ಸಿರಾದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಎಂದಿಗಿಂತ ಕಡಿಮೆ ತಾಪಮಾನ ದಾಖಲಾಗಿದೆ. ಉತ್ತರ ಒಳನಾಡಿನಲ್ಲಿ ಉಷ್ಣಾಂಶ ಎಂದಿನಂತೆ ಮುಂದುವರಿದಿದೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.