ಬೆಂಗಳೂರು: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜನಜಾಗೃತಿ ಮೂಡಿಸಲು ‘ಸಂವಿಧಾನ ರಕ್ಷಣೆಗಾಗಿ ಕರ್ನಾಟಕ’ ಎಂಬ ಹೊಸ ಒಕ್ಕೂಟವನ್ನು ಪ್ರಗತಿಪರ ಸಂಘಟನೆಗಳು ಸ್ಥಾಪಿಸಿವೆ.
ಶಾಸಕರ ಭವನದಲ್ಲಿ ಭಾನುವಾರ ನಡೆದ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಒಕ್ಕೂಟ ರಚಿಸಲು ನಿರ್ಧರಿಸಲಾಯಿತು ಎಂದು ಕೋಮು ಸೌಹಾರ್ದ ವೇದಿಕೆ ಸಂಚಾಲಕ ಕೆ.ಎಲ್. ಅಶೋಕ್ ತಿಳಿಸಿದರು.
ಮತಾಂಧರು ಮತ್ತು ಸಂವಿಧಾನ ವಿರೋಧಿಗಳನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಒಕ್ಕೂಟದ ಉದ್ದೇಶ. ಮಾರ್ಗದರ್ಶಕ ಮಂಡಳಿ ರಚನೆ ಮತ್ತು ಅಭಿಯಾನದ ರೂಪುರೇಷೆ ಸಿದ್ಧಪಡಿಸಲು ಇದೇ 17ರಂದು ಮತ್ತೆ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
‘ಜಾತ್ಯತೀತ ಸಿದ್ಧಾಂತದ ಪಕ್ಷಗಳ ನಿರ್ಲಕ್ಷ್ಯದಿಂದ ಕೋಮುವಾದಿ ಶಕ್ತಿಗಳು ದೇಶದಲ್ಲಿ ನೆಲೆಯೂರಿದೆ. ಪರಿಣಾಮವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇಕ್ಕಟ್ಟಿಗೆ ಸಿಲುಕಿದೆ. ಈ ತಪ್ಪುಗಳನ್ನು ಅವರಿಗೆ ಮನವರಿಕೆ ಮಾಡಿಸುವುದು ಮತ್ತು ಒಟ್ಟಾಗಿ ಹೋರಾಡುವುದು ಇಂದಿನ ಅಗತ್ಯ’ ಎಂದು ಜನಸಂಗ್ರಾಮ ಪರಿಷತ್ ಗೌರವ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಅಭಿಪ್ರಾಯಪಟ್ಟರು.
ಜನಾಂದೋಲನ ಮಹಾಮೈತ್ರಿ, ಸ್ವರಾಜ್ ಅಭಿಯಾನ, ಜನಶಕ್ತಿ, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಜಮಾತೆ– ಇಸ್ಲಾಮಿ ಹಿಂದ್, ಮಹಿಳಾ ಮುನ್ನಡೆ, ದಲಿತ ಹೋರಾಟ ಸಮಿತಿ, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ ಮತ್ತಿತರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.