ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಕ್ಕಟ್ಟಿನಲ್ಲಿರುವ ಪ್ರಜಾಪ್ರಭುತ್ವಕ್ಕೆ ಅಡಿಗರ ಚಿಂತನೆ ಬೇಕಿದೆ’

ಕಾರ್ಯಕ್ರಮದಲ್ಲಿ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯ
Last Updated 18 ಫೆಬ್ರುವರಿ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ. ರಾಜಕೀಯ ಪ್ರಜ್ಞೆ ಹೊಂದಿದ್ದ ಕವಿ ಗೋಪಾಲಕೃಷ್ಣ ಅಡಿಗರ ಚಿಂತನೆಗಳು ಇಂತಹ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತವೆ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ದಯಾನಂದ ಸಾಗರ ಕಾಲೇಜು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ತಲೆಮಾರಿನ ಜನರಿಗೆ ನೈತಿಕ ಮೌಲ್ಯಗಳನ್ನು ಕಲಿಸಿಕೊಟ್ಟ ಅಡಿಗರು, ಅವುಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿದರು. ಸಾಕಷ್ಟು ಜನರನ್ನು ಬೆಳೆಸಿದರು. ಆದರೆ, ಅವರಿಂದಾಗಿ ಬೆಳೆದ ಅನೇಕರು ಅಡಿಗರನ್ನೇ ಮರೆತುಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.

‘ಅಡಿಗರ ಕವನಗಳಲ್ಲಿನ ಬೆಚ್ಚಿ ಬೀಳಿಸುವ ಸಾಲುಗಳು ಮಡಿವಂತ ಸಾಹಿತಿಗಳಿಗೆ ಇಷ್ಟವಾಗುತ್ತಿರಲಿಲ್ಲ. ಅವರು ಅಶ್ಲೀಲ ಪದ್ಯ ಬರೆಯುತ್ತಿದ್ದಾರೆ ಎಂದೂ ಕೆಲವರು ಆರೋಪಿಸಿದ್ದರು. ಆಗಿನ ಮುಖ್ಯಮಂತ್ರಿಗೂ ಈ ಬಗ್ಗೆ ಪತ್ರ ಬರೆದು ದೂರಿದ್ದರು. ತಮ್ಮನ್ನು  ಭೇಟಿಯಾಗುವಂತೆ ಸೂಚಿಸಿ ಅಡಿಗರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದರು. ಇದಕ್ಕೆ ಅಡಿಗರೂ ಸ್ವಾಭಿಮಾನದಿಂದ ಉತ್ತರಿಸಿದ್ದರು. ತಾವು ಹೇಳಿದ ಸಮಯಕ್ಕೆ ನಿಮ್ಮಲ್ಲಿಗೆ ಬರಲು ಸಾಧ್ಯವಿಲ್ಲ. ನಮ್ಮಿಬ್ಬರಿಗೂ ಸಮಯ ಸಿಕ್ಕಾಗ ಭೇಟಿಯಾಗೋಣ ಎಂದು ತಿಳಿಸಿದ್ದರು’ ಎಂದು ಹಳೇ ಪ್ರಸಂಗವೊಂದನ್ನು ನೆನಪಿಸಿಕೊಳ್ಳುವ ಮೂಲಕ ಕವಿಯ ವ್ಯಕ್ತಿತ್ವ ದರ್ಶನ ಮಾಡಿಸಿದರು.

‘ಈಗಿನ ಸಾಹಿತಿಗಳು ರಾಜಕಾರಣಿಗಳ ಹಿಂದೆ, ಮುಂದೆಯೇ ಸುತ್ತಾಡುತ್ತಿರುತ್ತಾರೆ. ಸ್ವಾಯತ್ತ ಮನೋಭಾವವನ್ನೇ ಕಳೆದುಕೊಂಡಿದ್ದಾರೆ. ಪ್ರಭುತ್ವದ ವಿರುದ್ಧ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

ನವ್ಯಕವಿಯ ಕಾವ್ಯಶಕ್ತಿಯ ಕುರಿತು ವಿವರಿಸಿದ ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ‘ಒಳ ಮನಸ್ಸಿನ ಅನುಭವ ಹೇಳಲು ಅವರು ಪ್ರತಿಮೆಗಳನ್ನು ಸೃಷ್ಟಿಸುತ್ತಿದ್ದರು. ಹೀಗಾಗಿ ಅವರ ಕಾವ್ಯದ ಪ್ರತಿಮೆಗಳ ವ್ಯಾಪ್ತಿ ವಿಸ್ತಾರವಾದುದು. ಅವರ ಒಂದೊಂದು ಸಾಲೂ ಒಂದೊಂದು ಪ್ರತಿಮೆ. ಆ ಪ್ರತಿಮೆಗಳನ್ನು ಅರ್ಥ ಮಾಡಿಕೊಳ್ಳಲು ಭಾಷಾಜ್ಞಾನ ಬೇಕು’ ಎಂದರು.

ಹೊಗೆ, ಬೆಂಕಿ,

ಅಯ್ಯೋ.. ಹಾಳಾಗ!

ಉರಿ, ಸೆಕೆ, ತಾಪ,

ಹೊರಗೆ ರಣ ರಣ ಬಿಸಿಲು

ಒಳಗೆ ಮಾರಣ ಬೆಂಕಿ

ಮಲಗಿತ್ತು ಮನ ಚಿತೆಯ ಮೇಲೆ ಆಫೀಸಿನಲಿ... ಎಂಬ ‘ಹಿಮಗಿರಿಯ ಕಂದರ’ ಕವನದ ಈ ಸಾಲುಗಳು ಅವರ ಕಾವ್ಯಶಕ್ತಿಯನ್ನು ತೋರಿಸುತ್ತದೆ. ನವೋದಯದಿಂದ ಕಳಚಿಕೊಂಡ ಬಳಿಕ ಅಡಿಗರು ‘ಚಂಡೆಮದ್ದಳೆ’ ಕವನ ಸಂಕಲನದ ಮೂಲಕ ನವ್ಯ ಲೋಕಕ್ಕೆ ಕಾಲಿಟ್ಟರು. ಸೂಕ್ಷ್ಮವಾದ, ಆಳವಾದ ವಿಷಯವನ್ನು ಒಳಗೊಂಡ ಸಾಲುಗಳನ್ನು ಅವರ ಕವನದಲ್ಲಿ ಕಾಣಬಹುದು ಎಂದು ವಿವರಿಸಿದರು.

ಸಾಹಿತಿ ಸುಮತೀಂದ್ರ ನಾಡಿಗ, ‘ಗಂಡಸುತನದ ಕಾವ್ಯವನ್ನು ಅವರು ಬರೆದರು. ಅವರ ನವ್ಯಕಾವ್ಯ ಮೊದಮೊದಲು ಜನರಿಗೆ ಅರ್ಥವಾಗಲಿಲ್ಲ. ಆದರೆ, ಅವರು ಜೀವನಕ್ಕೆ ಹತ್ತಿರವಾದ ವಿಷಯಗಳನ್ನು ಕಾವ್ಯದಲ್ಲಿ ಹೇಳಿದ್ದಾರೆ’ ಎಂದರು.

ಪದವಿ ಕಾಲೇಜುಗಳಿಗೆ ಅಡಿಗರ ಪುಸ್ತಕ ಹಂಚಿಕೆ

ಮರುಮುದ್ರಣಗೊಂಡಿರುವ ‘ವರ್ಧಮಾನ’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

‘ಅಡಿಗರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಹೊಸ ತಲೆಮಾರಿನವರಿಗೆ ಅವರನ್ನು ಪರಿಚಯಿಸುವ ಉದ್ದೇಶ ಹೊಂದಿದ್ದೇವೆ. ಅಡಿಗರ ಸಮಗ್ರ ಸಾಹಿತ್ಯವನ್ನು ಈ ವರ್ಷದೊಳಗೆ ಪ್ರಕಟಿಸುವ ಯೋಜನೆ ಇದೆ. ಅದನ್ನು ರಾಜ್ಯದ ಎಲ್ಲಾ ಪದವಿ ಕಾಲೇಜುಗಳಿಗೆ ಉಚಿತವಾಗಿ ನೀಡುತ್ತೇವೆ’ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT