ಬೀದರ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭಾನುವಾರ ಇಲ್ಲಿಯ ಗುರುದ್ವಾರಕ್ಕೆ ಭೇಟಿ ನೀಡಿ ಗುರು ಗ್ರಂಥ ಸಾಹೇಬ ದರ್ಶನ ಪಡೆದರು.
ಎರಡು ಗಂಟೆ ತಡಮಾಡಿ ಬಂದ ಅಮಿತ್ ಶಾ ದಂಪತಿ ಗುರುದ್ವಾರ ಕಚೇರಿಗೆ ಹೋಗಿ ದಾಖಲೆ ಪುಸ್ತಕದಲ್ಲಿ ಸಹಿ ಮಾಡಿದರು. ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಬಲಬೀರ್ ಸಿಂಗ್ ಶಾಲು ಹೊದಿಸಿ ಬೆಳ್ಳಿ ಖಡ್ಗ ನೀಡಿ ಗೌರವಿಸಿದರು.
ನಂತರ ಅಮೃತ ಕುಂಡದ ಬಳಿ ಬಂದು ತೀರ್ಥ ಸ್ವೀಕರಿಸಿದರು. ಅಲ್ಲಿಂದ ಗುರುದ್ವಾರಕ್ಕೆ ಬಂದು ಶಿರಬಾಗಿ ನಮಸ್ಕರಿಸಿದರು. ಆವರಣದಲ್ಲಿ 20 ನಿಮಿಷ ಕಳೆದು ಬೀದರ್ ತಾಲ್ಲೂಕಿನ ರೇಕುಳಕಿ ಮೌಂಟ್ಗೆ ತೆರಳಿದರು.
ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಇದ್ದರು.
ಸುರಪುರದಲ್ಲಿ ಸಮಾವೇಶಕ್ಕೆ ಪಕ್ಷದ ಧ್ವಜ ಹಿಡಿದು ಬರುತ್ತಿರುವ ಕಾರ್ಯರ್ತರು.
ಸುರಪುರದಲ್ಲಿ ನವಶಕ್ತಿ ಸಮಾವೇಶಕ್ಕೆ ಶಾ
ಯಾದಗಿರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಿಲ್ಲೆಯ ಸುರಪುರದಲ್ಲಿ ಭಾನುವಾರ ನಡೆಯುತ್ತಿರುವ ನವಶಕ್ತಿ ಸಮಾವೇಶಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ಶಾ ಅವರ ನಿರೀಕ್ಷೆಯಲ್ಲಿದ್ದಾರೆ.