ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲಮನ್ನಾಕ್ಕೆ ಕಾಂಗ್ರೆಸ್‌ ಕೊಡುಗೆಯೇ ಹೆಚ್ಚು’

ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
Last Updated 14 ಜುಲೈ 2018, 20:06 IST
ಅಕ್ಷರ ಗಾತ್ರ

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ರಾಜ್ಯದಾದ್ಯಂತ ಓಡಾಡಿ ಪಕ್ಷಕ್ಕೆ ಹೊಸ ಚೈತನ್ಯ ನೀಡುವ ಉತ್ಸಾಹದಲ್ಲಿದ್ದಾರೆ. ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನ ಇಲ್ಲಿದೆ:

* ಕೆಪಿಸಿಸಿ ಸಾರಥ್ಯಕ್ಕೆ ಈಗ ಬ್ರಾಹ್ಮಣ–ವೀರಶೈವ ಜಾತಿ ಸಮೀಕರಣದ ತಂತ್ರವನ್ನು ಹೆಣೆಯಲಾಗಿದೆ. ಈ ಮೂಲಕ ಹೈಕಮಾಂಡ್‌ ಯಾವ ಸಂದೇಶ ನೀಡಲು ಹೊರಟಿದೆ?

ಕಾಂಗ್ರೆಸ್‌ ಜಾತ್ಯತೀತ ಪಕ್ಷ. ಎಲ್ಲ ಸಮುದಾಯದ ಜನರನ್ನು ತನ್ನ ಜತೆ ಒಯ್ಯುವಂತಹ ಪಕ್ಷ ಇಡೀ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್‌ ಮಾತ್ರ. ಬ್ರಾಹ್ಮಣ–ವೀರಶೈವ ಎಂಬ ಕಾರಣದಿಂದ ನಮಗೆ ನಾಯಕತ್ವ ವಹಿಸಿದ್ದಲ್ಲ; ನಿಷ್ಠಾವಂತರಿಗೆ, ಅನುಭವಸ್ಥರಿಗೆ, ಮಧ್ಯಮ ವಯಸ್ಸಿನವರಿಗೆ ಹೊಣೆ ವಹಿಸಿದರೆ ಬೇರುಮಟ್ಟದಲ್ಲಿ ಪಕ್ಷದ ಬಲವರ್ಧನೆ ಮಾಡಲು ಸಾಧ್ಯ ಎಂಬ ವರಿಷ್ಠರ ಚಿಂತನೆ ಈ ನೇಮಕದ ಹಿಂದೆ ಕೆಲಸ ಮಾಡಿದೆ.

* ಎಚ್‌.ಕೆ. ಪಾಟೀಲ, ಎಂ.ಬಿ. ಪಾಟೀಲರಂತಹ ‍ಪ್ರಭಾವಿಗಳನ್ನೂ ಮೀರಿ ಪಕ್ಷದ ಅಧಿಕಾರದ ಚುಕ್ಕಾಣಿ ನಿಮ್ಮ ಕೈ ಸೇರಿದ್ದು ಹೇಗೆ?

ರಾಜ್ಯದಾದ್ಯಂತ ಸುತ್ತಾಡಿ, ಕಾರ್ಯಕರ್ತರ ಅಳಲನ್ನು ಅರ್ಥ ಮಾಡಿಕೊಂಡು, ಪಕ್ಷದ ಬಲವರ್ಧನೆ ಮಾಡಲು ಬಹಳ ಜನ ಮುಖಂಡರು ಇಚ್ಛೆ ವ್ಯಕ್ತಪಡಿಸಿರುವುದು ನಿಜ. ಅಂತಹ ನಾಯಕರ ಪಡೆಯೇ ನಮ್ಮ ಪಕ್ಷದ ಶಕ್ತಿ. ಎಲ್ಲರಿಗೂ ಅಧ್ಯಕ್ಷ–ಕಾರ್ಯಾಧ್ಯಕ್ಷ ಸ್ಥಾನ ಕೊಡಲು ಆಗುವುದಿಲ್ಲ. ನಮ್ಮ ನಾಯಕ ರಾಹುಲ್‌ ಗಾಂಧಿ ಹಾಗೂ ಪಕ್ಷದ ರಾಜ್ಯ ಘಟಕದ ಹಿರಿಯರು ನನ್ನ ಮೇಲೆ ನಂಬಿಕೆ ಇಟ್ಟು ಈ ನೇಮಕ ಮಾಡಿದ್ದಾರೆ. ನನಗೆ ಎಲ್ಲರೂ ಶುಭ ಹಾರೈಸಿದ್ದು, ಸಹಕಾರದ ಭರವಸೆ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಂಡು ಪಕ್ಷದ ಸಂಘಟನೆ ಮಾಡಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

* ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪತ್ರ ಬರೆದರೂ ಅನ್ನಭಾಗ್ಯದ ಅಕ್ಕಿ ಏಳು ಕೆ.ಜಿ.ಗೆ ಏರಲಿಲ್ಲ. ಪೆಟ್ರೋಲ್‌–ಡೀಸೆಲ್‌ ತೆರಿಗೆ ಇಳಿಯಲಿಲ್ಲ. ಏನು, ಮುಖ್ಯಮಂತ್ರಿ ನಿಮ್ಮ ಮಾತನ್ನು ಕೇಳುವುದಿಲ್ಲವೇ?

ಅನ್ನಭಾಗ್ಯದ ಅಕ್ಕಿಯನ್ನು ಏಳು ಕೆ.ಜಿ.ಗೆ ಏರಿಸುವ ಭರವಸೆಯನ್ನು ಮುಖ್ಯಮಂತ್ರಿ ವಿಧಾನಸಭೆಯಲ್ಲೇನೀಡಿದ್ದಾರೆ. ಅದರಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಪೆಟ್ರೋಲ್‌–ಡೀಸೆಲ್‌ ತೆರಿಗೆ ಇಳಿಕೆ ಸೇರಿದಂತೆ ಯಾವುದೇ ವಿಷಯದಲ್ಲಿ ನಾವು ಮೈತ್ರಿಧರ್ಮ ಪಾಲನೆ ಮಾಡಲಿದ್ದೇವೆ. ಆಡಳಿತಾತ್ಮಕ ವಿಷಯಗಳ ಕುರಿತು ಸಮನ್ವಯ ಸಮಿತಿಯ ಅಧ್ಯಕ್ಷರು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸಮಿತಿಯಲ್ಲಿರುವ ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಕುಳಿತು ತೀರ್ಮಾನ ಮಾಡುತ್ತಾರೆ.

* ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗೆದ್ದಿದೆ. ಅದಕ್ಕೆ ಕಾಂಗ್ರೆಸ್‌ ಮುಖಂಡ ಎಚ್‌.ಕೆ. ಪಾಟೀಲರೇ ದನಿಯಾಗಿದ್ದಾರಲ್ಲ?

ಅಖಂಡ ಕರ್ನಾಟಕದ ಅಭಿವೃದ್ಧಿ ಕಾಂಗ್ರೆಸ್‌ನ ಧ್ಯೇಯೋದ್ದೇಶ. ಪಾಟೀಲರು ಪಕ್ಷದ ಹಿರಿಯ ಮುಖಂಡರು. ಅಸಮತೋಲನ ಕಂಡುಬಂದಾಗ ಸಲಹೆ ಕೊಡುತ್ತಾರೆ. ಆ ಸಲಹೆ ಅಳವಡಿಸಿಕೊಂಡು, ಅನುಷ್ಠಾನಕ್ಕೆ ತರುವ ಕೆಲಸವನ್ನು ಸಮ್ಮಿಶ್ರ ಸರ್ಕಾರ ಮಾಡಬೇಕು.

* ಈ ಸರ್ಕಾರದ ಸೂತ್ರಧಾರರು ಯಾರು; ದೇವೇಗೌಡರೋ ಸಿದ್ದರಾಮಯ್ಯನವರೋ?

ದೇವೇಗೌಡರು ಮುತ್ಸದ್ದಿ ರಾಜಕಾರಣಿ. ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಅವರ ಮೇಲೆ ನಮಗೆ ಅಪಾರ ಗೌರವ ಇದೆ. ಅನುಭವಸ್ಥರಾದ ಅವರಿಂದ ಸರ್ಕಾರಕ್ಕೆ ಮಾರ್ಗದರ್ಶನ ಬೇಕು. ಸಿದ್ದರಾಮಯ್ಯ ಕೂಡ ಜನಸಮೂಹದ ನಾಯಕ. ಅವರೂ ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತಾರೆ.

ರಾಹುಲ್‌ ಗಾಂಧಿ ಅವರು ಸರ್ಕಾರದ ಯಶಸ್ಸಿಗಾಗಿ ಸೂತ್ರವನ್ನು ರೂಪಿಸಿ ಕೊಟ್ಟಿದ್ದಾರೆ. ಆ ಸೂತ್ರದಂತೆ ಕಾರ್ಯನಿರ್ವಹಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿರುವಂತೆ ನೋಡಿಕೊಳ್ಳುವುದು ಕೆಪಿಸಿಸಿ ಹೊಣೆಯಾಗಿದೆ.

* ರೈತರ ಸಾಲಮನ್ನಾ ಯೋಜನೆ ನಿಮ್ಮ ಪಕ್ಷಕ್ಕಿಂತ ಜೆಡಿಎಸ್‌ಗೆ ಜನಪ್ರಿಯತೆ ತಂದುಕೊಡಲಿದೆ ಎಂಬ ಅಭಿಪ್ರಾಯ ಇದೆಯಲ್ಲ?

ನೋಡಿ, ನಾವು 79 ಶಾಸಕರಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚಿನ ಭಾಗೀದಾರರಾಗಿದ್ದೇವೆ. ಅಲ್ಲದೆ, ನಮ್ಮ ಸಹಕಾರದಿಂದ ಈ ಯೋಜನೆ ರೂಪಿತವಾಗಿದೆ. ಬಜೆಟ್‌ ಸಿದ್ಧಪಡಿಸುವ ಮೊದಲೇ ರಾಹುಲ್‌ ಗಾಂಧಿಯವರು ಈ ಯೋಜನೆಗೆ ಕ್ಲಿಯರೆನ್ಸ್‌ ಕೊಟ್ಟಿದ್ದರು. ಹೀಗಾಗಿ ಸಾಲಮನ್ನಾದ ಹೆಚ್ಚಿನ ಶ್ರೇಯಸ್ಸು ಕಾಂಗ್ರೆಸ್‌ಗೇ ಸಲ್ಲುತ್ತದೆ.

* ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯವಾಗಿ ಕಾಂಗ್ರೆಸ್‌ ಪಕ್ಷದ ನಿಲುವೇನು?

ವೀರಶೈವ– ಲಿಂಗಾಯತ ಎರಡೂ ಸಮಾನಾರ್ಥಕ ಪದಗಳು. ಅಂಗೈಯಲ್ಲಿ ಲಿಂಗ ಇಕ್ಕಿ ಪೂಜೆ ಮಾಡುವವರು, ಅಷ್ಟಾವರಣ, ಪಂಚಾಚಾರ್ಯ, ಷಟ್‌ಸ್ಥಲ ಅನುಸರಣೆ ಮಾಡುವವರೆಲ್ಲ ವೀರಶೈವ ಲಿಂಗಾಯತರು. ಇದರಲ್ಲಿ ಪ್ರತ್ಯೇಕತೆ ಆಗುವಂಥದು ಏನೂ ಇಲ್ಲ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬಂದಾಗ ಇದನ್ನೇ ಪ್ರತಿಪಾದನೆ ಮಾಡಿದ್ದೆ.

ಪ್ರತ್ಯೇಕ ವೀರಶೈವ–ಲಿಂಗಾಯತ ಧರ್ಮ ಸ್ಥಾಪಿಸಬೇಕು ಎಂದೇ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಈ ವಿಷಯದಲ್ಲಿ ಆಗಿನ ಸರ್ಕಾರದ ತಪ್ಪಿಲ್ಲ. ನಮ್ಮ ಸಮುದಾಯದವರೇ ಕೆಲವು ಜನ ಎರಡನ್ನೂ ಬೇರ್ಪಡಿಸಲು ಹೊರಟು, ವಿರೋಧಿಗಳಿಗೆ ಅಸ್ತ್ರ ಕೊಟ್ಟರು. ಅದನ್ನು ಬಿಜೆಪಿಯವರು ರಾಜಕೀಯಕ್ಕಾಗಿ ಬಳಸಿಕೊಂಡರು.

* ಎರಡನ್ನೂ ಬೇರ್ಪಡಿಸಲು ಹೊರಟ ಆ ನಿಮ್ಮವರು ಯಾರು, ಅವರೀಗ ಎಲ್ಲಿದ್ದಾರೆ?

ನಾವೆಲ್ಲ ಸಹೋದರರು. ಅವರ ಕುರಿತು ಟೀಕೆ–ಟಿಪ್ಪಣೆ ಮಾಡಲ್ಲ.

* ಮೋದಿ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ಅರೆಕ್ಷಣ ಮರೆತು, ಅದರ ಸಕಾರಾತ್ಮಕ ಸಾಧನೆಗಳ ಕುರಿತು ಹೇಳಿ...

ಅಯ್ಯೋ, ಮೋದಿ ಸರ್ಕಾರದ್ದು ಶೂನ್ಯ ಸಾಧನೆ ಬಿಡಿ. ಉದ್ಯೋಗ ಸೃಷ್ಟಿಸುವ ಕುರಿತು ಅವರು ನೀಡಿದ್ದ ಭರವಸೆ ನಂಬಿ 18ರಿಂದ 30 ವರ್ಷದೊಳಗಿನ ಯುವಕರು ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿದ್ದರು. ನಿರುದ್ಯೋಗ ಸಮಸ್ಯೆ ಬೆಳೆಯಿತೇ ಹೊರತು, ಉದ್ಯೋಗಗಳು ಸೃಷ್ಟಿಯಾಗಲಿಲ್ಲ. ರೈತರ ಕಣ್ಣೀರು ಒರೆಸುವ ಕೆಲಸವನ್ನೂ ಅವರು ಮಾಡಲಿಲ್ಲ. ಜಿಡಿಪಿ ದರ ಕುಸಿದಿದೆ. ಅಸಹಿಷ್ಣುತೆ ಹೆಚ್ಚಿದೆ. ಏನು ಸಾಧನೆ ಮಾಡಿದೆ ಅಂತ ಹೇಳುವುದು? ಮೋದಿ ಸರ್ಕಾರಕ್ಕೆ ಮೈನಸ್‌ ಒಂದು ಅಂಕ.

* ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯನ್ನು ಹೇಗೆಮೆಟ್ಟಿ ನಿಲ್ಲುವಿರಿ?

ಎಲ್ಲಿದೆ ಮೋದಿ ಅಲೆ? ಅದು ಬರೀ ಗಾಳಿ ಮಾತು. ಅವರ ಪಾಪ್ಯುಲಾರಿಟಿ ಕುಸಿದುಹೋಗಿದೆ. ನಾಲ್ಕು ವರ್ಷಗಳ ಹಿಂದೆ ಲೋಕಸಭೆ ಚುನಾವಣೆ ಪೂರ್ವದಲ್ಲಿ ಇದ್ದ ಪಾಪ್ಯುಲಾರಿಟಿ ಸಂಪೂರ್ಣ ಮಾಧ್ಯಮದ ಸೃಷ್ಟಿ. ಮೋದಿ ಕೊಟ್ಟ ಭರವಸೆಗಳೆಲ್ಲ ಸುಳ್ಳಾಗಿವೆ ಎಂಬುದು ಜನರಿಗೆ ಅರ್ಥವಾಗಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ಅವರ ನಡೆಯನ್ನು ಜನ ತಿರಸ್ಕರಿಸಲಿದ್ದು, 2019ರಲ್ಲಿ ಅವರ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕಲಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಪಿಎ–3 ಸರ್ಕಾರವೇ ಅಧಿಕಾರಕ್ಕೆ ಬರಲಿದೆ.

* ಮೋದಿ ಅಲೆ ಇಲ್ಲ ಅನ್ನುವುದಾದರೆ ವಿಧಾನಸಭೆ ಚುನಾವಣೆಯಲ್ಲಿ ನಿಮಗೇಕೆ ಕಡಿಮೆ ಸ್ಥಾನಗಳು ಬರುತ್ತಿದ್ದವು?

ಬಿಜೆಪಿಯ ಅಪಪ್ರಚಾರ, ಮೋಸ, ವಂಚನೆ ಮತ್ತು ಮತಗಳಧ್ರುವೀಕರಣಕ್ಕೆ ಆ ಪಕ್ಷ ನಡೆಸಿದ ಕುಮ್ಮಕ್ಕು – ಇವುಗಳಿಂದ ನಾವು ಹಿಂದೆ ಬಿದ್ದೆವು. ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳ ಮಾಹಿತಿಯನ್ನು ಮನೆ–ಮನೆಗೆ ತಲುಪಿಸಲು ಸಹ ನಾವು ವಿಫಲರಾದೆವು. ಇನ್ನುಮುಂದೆ ಇಂತಹ ವೈಫಲ್ಯಗಳಿಗೆ ಅವಕಾಶ ಇಲ್ಲ. ಸಹೋದರ ದಿನೇಶ್‌ ಗುಂಡೂರಾವ್‌ ಮತ್ತು ನಾನು ಇಬ್ಬರೂ ಕೂಡಿ ಪಕ್ಷ ಸಂಘಟನೆ ಮಾಡಿ, ಗತ ವೈಭವವನ್ನು ಮರು ಸ್ಥಾಪನೆ ಮಾಡುತ್ತೇವೆ.

* ಲೋಕಸಭೆ ಚುನಾವಣೆವರೆಗೆ ಈ ಸರ್ಕಾರ ಇರುತ್ತದೆಯೇ? ಚುನಾವಣೆಯಲ್ಲೂ ಮೈತ್ರಿ ಮುಂದುವರಿಯುವುದೇ?

ಈ ಸರ್ಕಾರ ಸುಭದ್ರವಾಗಿ, ಸ್ಥಿರವಾಗಿ ಐದು ವರ್ಷಗಳ ಪೂರ್ಣಾವಧಿ ಪೂರೈಸಲಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳಲು ಈಗಾಗಲೇ ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ.

* ಪಕ್ಷ ಪ್ರೇಮವನ್ನು ಬಿಟ್ಟು ಪ್ರಾಮಾಣಿಕವಾಗಿ ಹೇಳಿ, ಲೋಕಸಭೆ ಚುನಾವಣೆ ಫಲಿತಾಂಶ ಏನಾಗಿರಬಹುದು?

ರಾಜ್ಯದ 28 ಕ್ಷೇತ್ರಗಳಲ್ಲಿ ನಮ್ಮ ಮೈತ್ರಿಕೂಟ 25 ಸ್ಥಾನಗಳನ್ನು ಗೆಲ್ಲಲಿದೆ. ಕೇಂದ್ರದಲ್ಲಿ ರಾಹುಲ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT