ಪಂಜಾಬಿನಲ್ಲಿ ಶೀಘ್ರವೇ ಬಿಕ್ಕಟ್ಟು ಅಂತ್ಯ
ನವದೆಹಲಿ, ಮಾ. 11– ಪಂಜಾಬಿನಲ್ಲಿ ಸಂವಿಧಾನಾತ್ಮಕ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಕ್ರಮಗಳನ್ನು ರೂಪಿಸಲಾಗಿದೆ.
ಸ್ಪೀಕರರು ಪಂಜಾಬ್ ವಿಧಾನ ಸಭೆಯನ್ನು ಎರಡು ತಿಂಗಳ ಕಾಲ ಮುಂದಕ್ಕೆ ಹಾಕಿದ್ದರೂ ಸಹ ರಾಜ್ಯಪಾಲ ಶ್ರೀ ಡಿ.ಸಿ. ಪಾವಟೆ ಅವರು ಅಧಿವೇಶನವನ್ನೇ ಮುಂದಕ್ಕೆ ಹಾಕಿ ಆನಂತರ ಸಭೆಯನ್ನು ಕರೆಯಲು ಸಂವಿಧಾನದ 174ನೇ ವಿಧಿಯಲ್ಲಿ ದತ್ತವಾದ ಅಧಿಕಾರಗಳನ್ನು ಬಳಸಿಕೊಳ್ಳುವ ನಿರೀಕ್ಷೆ ಇದೆ.
ಮಹಾ ತಾಯಿ!
ಹೌಮ, ಲೂಯಿಸಿಯಾನ, ಮಾ. 11– ಶ್ರೀಮತಿ ಆಂಟೊಯಿನ್ ಲೋಡ್ರಿಗ್ ಇಂದು ತನ್ನ ಇಪ್ಪತ್ತೇಳನೇ ಮಗುವಿಗೆ ಜನ್ಮವಿತ್ತಳು. ಈ ಸಾರಿ ಹುಟ್ಟಿದ್ದು 8 ಪೌಂಡ್ ತೂಕದ ಆರೋಗ್ಯಶಾಲಿ ಗಂಡು ಮಗು. ಲೋಡ್ರಿಗ್ ದಂಪತಿಗಳ 27 ಮಕ್ಕಳೂ ಬದುಕಿದ್ದಾರೆ. ಮೂವರಿಗೆ ಮದುವೆಯಾಗಿದೆ. ಮಲಗುವ ಕೋಣೆಗಳೆರಡು ಇರುವ ಮನೆಯಲ್ಲಿ ಉಳಿದೆವರೆಲ್ಲಾ ವಾಸವಾಗಿದ್ದಾರೆ.
ಕಾಫಿ, ಏಲಕ್ಕಿ ಬೆಳೆಸಲು 3000 ಎಕರೆ ಅರಣ್ಯ ಭೂಮಿ
ಬೆಂಗಳೂರು, ಮಾ. 11– ಉತ್ತರ ಕನ್ನಡ ಜಿಲ್ಲೆಯ ಶಿರ್ಶಿ, ಸೂಪ, ಯಲ್ಲಾಪುರ ಮತ್ತು ಹೊನ್ನಾವರ ತಾಲ್ಲೂಕುಗಳಲ್ಲಿ ರಬ್ಬರು, ಕಾಫಿ ಮತ್ತು ಏಲಕ್ಕಿ ಬೆಳೆಯಲು 3,000 ಎಕರೆ ಅರಣ್ಯ ಭೂಮಿಯನ್ನು ಬಿಡುಗಡೆ ಮಾಡಲು ಸರಕಾರ ನಿರ್ಧರಿಸಿದೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಇತ್ತೀಚೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತೆಂದು ಕಂದಾಯ ಸಚಿವ ಶ್ರೀ ಬಿ. ರಾಚಯ್ಯನವರು ಇಂದು ವಿಧಾನ ಸಭೆಯಲ್ಲಿ ಹೇಳಿದರು.