ಹುಬ್ಬಳ್ಳಿ: ಇತ್ತೀಚೆಗೆ ತೆರೆಕಂಡ ‘ಟಗರು’ ಚಿತ್ರದಲ್ಲಿ ‘ಚಿಟ್ಟೆ’ ಎಂಬ ಖಳನ ಪಾತ್ರದ ಮೂಲಕ ಗಮನ ಸೆಳೆದಿರುವ ನಟ ವಶಿಷ್ಠ ಸಿಂಹ ಭಾನುವಾರ ಹುಬ್ಬಳ್ಳಿಗೆ ಭೇಟಿ ನೀಡಿದರು.
ನೆಚ್ಚಿನ ನಟನನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಸಿಂಹ ಅವರನ್ನು ಕೊಪ್ಪೀಕರ್ ರಸ್ತೆಯಿಂದ ‘ಟಗರು’ ಚಿತ್ರ ಪ್ರದರ್ಶನ ಕಾಣುತ್ತಿರುವ ಸುಧಾ ಚಿತ್ರಮಂದಿರದವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಕರೆತಂದರು.
ಮಹಿಳೆಯರ ಡೊಳ್ಳು ಕುಣಿತ, ಪಟಾಕಿ ಸದ್ದು ಹಾಗೂ ಅಭಿಮಾನಿಗಳ ಹರ್ಷೋದ್ಗಾರ ಮೆರವಣಿಗೆಗೆ ಮೆರುಗು ತಂದಿತು.
ಬಳಿಕ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ವಶಿಷ್ಠ ಸಿಂಹ, ‘ಖಳನಟನೊಬ್ಬನಿಗೆ ಈ ಪರಿಯ ಸ್ವಾಗತ ಸಿಗುತ್ತಿರುವುದು ಹೆಮ್ಮೆಯ ವಿಷಯ’ ಎಂದರು.
‘ಇತ್ತೀಚೆಗೆ ಕೇವಲ ನಾಯಕ ನಟರಿಗಷ್ಟೇ ಅಲ್ಲದೆ, ಸಹನಟರು ಹಾಗೂ ಖಳನಟರಿಗೂ ಮಹತ್ವ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದ ಅವರು, ಅಭಿಮಾನಿಗಳ ಒತ್ತಾಸೆಯ ಮೇರೆಗೆ ತಾವು ನಟಿಸಿದ ಚಿತ್ರಗಳ ಕೆಲ ಡೈಲಾಗ್ಗಳನ್ನು ಹೇಳಿ ನೆರೆದಿದ್ದವರನ್ನು ರಂಜಿಸಿದರು.