ರಾಮದುರ್ಗ: ತಾಲ್ಲೂಕಿನ ಹಲಗತ್ತಿ ಗ್ರಾಮದ ಬಸವಣ್ಣ ದೇವರ ಗುಡಿಯಲ್ಲಿ ಯುಗಾದಿ ಅಂಗವಾಗಿ ಮಾರ್ಚ್ 17ರಿಂದ 23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 17ರಂದು ಯುಗಾದಿ ಅಮಾವಾಸ್ಯೆ, 18ರಂದು ಓಕಳಿ ಹೊಂಡ ಪೂಜೆ, 19ರಿಂದ 21ರವರೆಗೆ ಬಣ್ಣದ ಓಕುಳಿ ಹಾಗೂ 23ರಂದು ಬಸವಣ್ಣನ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 22ರಂದು ಸಂಜೆ ಬಸವಣ್ಣನ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು, ವಾದ್ಯ ಸಮೇತವಾಗಿ ಗುಡ್ಡಕ್ಕೆ ತೆರಳಿ ಅಲ್ಲಿ ಒಂದು ಮರಕ್ಕೆ ಬಸವಣ್ಣನ ಪಲ್ಲಕ್ಕಿ ಇಡುತ್ತಾರೆ. ಅದೇ ದಿನ ರಾತ್ರಿ ಗುಡ್ಡದಿಂದ ಪಲ್ಲಕ್ಕಿ ಮರಳಿ ಊರಿಗೆ ಬರುತ್ತದೆ. ಆ ದಿನ ಪೂರ್ತಿ ಜಾಗರಣೆ ಬೆಳಗಿನ ಜಾವದವರೆಗೆ ನಾಟಕ ಪ್ರದರ್ಶನ ನಡೆಯಲಿದೆ.
ಮಾರ್ಚ್ 23 ರಂದು ಪಲ್ಲಕ್ಕಿ ಉತ್ಸವಕ್ಕೆ ಕೊನೆ ದಿನ ಅಂದು ಗುಡಿಯ ಒಳಗೆ ಬಸವಣ್ಣ ಪ್ರವೇಶ ಮಾಡುತ್ತಾನೆ. ಆ ದಿನ ಪಂಚಾಯಿತಿ ಕಟ್ಟೆಯಿಂದ ಗುಡಿಯ ಒಳಗೆ ಹೋಗುವಾಗ ಕರಡಿ ಮಜಲು, ಡೊಳ್ಳು ಹಾಗೂ ಬಾಜಾ ಭಜಂತ್ರಿಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ.