ಉಡುಪಿ: ‘ಸಮಾಜದ ಎಲ್ಲಾ ವರ್ಗಗಳು ಅಭಿವೃದ್ಧಿ ಹೊಂದಿ ಸಮಾನ ಹಂತಕ್ಕೆ ತಲುಪಿದಾಗ ಮಾತ್ರ ಸಂವಿಧಾನದಲ್ಲಿ ಉಲ್ಲೇಖಿಸಿರುವ ಸಮಾನತೆಗೆ ನಿಜವಾದ ಅರ್ಥ ಸಿಗುತ್ತದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಾಂಗ್ರೆಸ್ನ ವಿದ್ಯಾರ್ಥಿ ಸಂಘಟನೆ ಎನ್ಎಸ್ಯುಐ ಬುಧವಾರ ಆಯೋಜಿಸಿದ್ದ ನನ್ನ ಕರ್ನಾಟಕ ಸಂವಾದ ಕಾರ್ಯಕ್ರಮದಲ್ಲಿ, ಎಲ್ಲ ವರ್ಗದಲ್ಲಿಯೂ ಬಡವರು ಇರುವಾಗ ಪರಿಶಿಷ್ಟ ಜಾತಿ– ಪಂಗಡದವರಿಗೆ ಮಾತ್ರ ಏಕೆ ಮೀಸಲಾತಿ, ಲ್ಯಾಪ್ ಟಾಪ್ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಅವರ ಪ್ರಶ್ನೆಗೆ ಉತ್ತರಿಸಿದರು.
ಸಂವಿಧಾನ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಇದರ ಹೊರತಾಗಿ ಅವರು ಸಾವಿರಾರು ವರ್ಷದಿಂದ ಮೇಲ್ವರ್ಗದಿಂದ ಶೋಷಣೆಗೆ ಒಳಗಾಗಿದ್ದಾರೆ. ಕಳೆದ 50 ವರ್ಷಗಳಿಂದ ನೀಡಿದ ಮೀಸಲಾತಿಯಿಂದ ಇನ್ನೂ ಸಮಾನತೆ ಸಿಕ್ಕಿಲ್ಲ. ಮೀಸಲಾತಿ ಮೂಲಕ ಉದ್ಯೋಗ ಪಡೆದು ಅದೆಷ್ಟೋ ಜನರು ಉತ್ತಮ ಜೀವನ ನಡೆಸಿದರು ಇನ್ನೂ ಕೆಲವರು ಹಾಗೇ ಇದ್ದಾರೆ ಎಂದರು.
ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಎಲ್ಲ ವರ್ಗದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸುವ ಕುರಿತು ಟೆಂಡರ್ ಕರೆಯಾಲಾಗಿದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಹೆಣ್ಣು ಮಗುವಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಯುವ ಸಮುದಾಯಕ್ಕೆ ಇನ್ನೂ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಕುರಿತು ವಿದ್ಯಾರ್ಥಿ ವೈಶಾಖ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲೆಯ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಉದ್ಯಮ ಆರಂಭಿಸಲು ಪ್ರಶಸ್ತವಾದ ಸ್ಥಳವಾಗಿದೆ. 24x7 ವಿದ್ಯುತ್, ನೀರು ಸರಬರಾಜು ಹಾಗೂ ಇತರೆ ಮೂಲಭೂತ ಸೌಕರ್ಯವಿದೆ. ಆದರೆ ಇದಕ್ಕೆ ಅಗತ್ಯವಾಗಿ ಬೇಕಾಗಿರುವ ಸ್ಥಳದ ಕೊರತೆಯಿಂದ ಜಿಲ್ಲೆ ಕೈಗಾರಿಕರಣದಲ್ಲಿ ಹಿಂದೆ ಉಳಿದಿದೆ . ಖಾಸಗಿ ಅವರಿಂದ ಭೂಮಿ ಪಡೆಯಬೇಕಾದರೆ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯಗಳಿವೆ ಎಂದು ಉತ್ತರಿಸಿದರು.
ಸಮಾಜ ಶಾಸ್ತ್ರ ವಿದ್ಯಾರ್ಥಿನಿ ಮಾತನಾಡಿ, ಕೊಳಗೇರಿಗಳಲ್ಲಿ ವಾಸಿಸೋ ಜನರಿಗೆ ಸರಿಯಾದ ಮನೆ ಹಾಗೂ ಮೂಲ ಭೂತ ಸೌಕರ್ಯ ಹಾಗೂ ಕಾರ್ಮಿಕ ಇಲಾಖೆಯಿಂದ ಸಿಗ ಬೇಕಾದ ಯಾವ ಸೌಲಭ್ಯಗಳೂ ಸಿಗುತ್ತಿಲ್ಲ ಎಂದರು.
ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಅವರ ಅಭಿವೃದ್ಧಿಗಾಗಿ ₹6,000 ಕೋಟಿ ಇದೆ. ಅಧಿಕಾರಿಗಳು ಕಾರ್ಮಿಕರ ಬಳಿ ತೆರಳಿ ನೋಂದಣಿ ಮಾಡುತ್ತಿದ್ಆರೆ. ಅವರಿಗೆ ಅಗತ್ಯವಿರುವ ಮಾಹಿತಿ ತರಬೇತಿ ನೀಡಲು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ನಿಟ್ಟೂರಿನಲ್ಲಿ ವಾಸ ಮಾಡುತ್ತಿದ್ದ 29 ಕುಟುಂಬಗಳಿಗೆ ಉತ್ತಮವಾದ ಮನೆ ನಿರ್ಮಿಸಲಾಗಿದೆ ಎಂದು ಪ್ರಮೋದ್ ಹೇಳಿದರು.
ಪ್ರತಿಕ್ರಿಯಿಸಿದ ಕೃಷಿ ಸಚಿವ ಕೃಷ್ಣ ಭೈರೇಗೌಡ, ಪ್ರತಿಯೊಂದು ಶಾಲೆಗಳಿಗೂ ನೇಮಕ ಮಾಡುವುದು ಕಷ್ಟ ಸಾಧ್ಯ. ಆದರೆ 10–30 ಶಾಲೆಗಳಿಗೆ ಒಟ್ಟಾಗಿ ನೇಮಕ ಮಾಡುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು.
ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ ಗಫೂರ್, ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ಶಿವರಾಜ್ ಮೋರೆ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.