ಬಾದಾಮಿ (ಬಾಗಲಕೋಟೆ ಜಿಲ್ಲೆ): 'ಕರ್ನಾಟಕದಲ್ಲಿ ಧರ್ಮ ವಿಭಜನೆ ಮಾಡುವುದರಲ್ಲಿ ಯಾರೂ ಸಫಲರಾಗುವುದಿಲ್ಲ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.
ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ ಮಂಗಳವಾರ ಶಿವಯೋಗ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಮಿತ್ ಶಾ ಮಾತನಾಡಿದರು.
ಧರ್ಮ ವಿಭಜನೆಯಲ್ಲಿ ನಮಗೆ ನಂಬಿಕೆ ಇಲ್ಲ. ಕರ್ನಾಟಕದಲ್ಲಿ ಧರ್ಮ ವಿಭಜನೆ ಮಾಡುವುದರಲ್ಲಿ ಯಾರೂ ಸಫಲರಾಗುವುದಿಲ್ಲ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಮಠಾಧೀಶರ ಸಭೆಯಲ್ಲಿ ಸ್ಪಷ್ಟಪಡಿಸಿದರು.
‘ವೀರಶೈವ ಲಿಂಗಾಯತ ಸಮಾಜದ ಅಖಂಡತೆಯನ್ನು ಒಡೆಯುವ ಪ್ರಕ್ರಿಯೆ ಈಗ ಕೇಂದ್ರದ ಅಂಗಳ ತಲುಪಿದೆ. ಆದರೆ ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯುವ ಕೆಲವರ ಹುನ್ನಾರವನ್ನು ಕೇಂದ್ರ ಸರ್ಕಾರ ಈಡೇರಿಸುವುದಿಲ್ಲ. ಸಮಾಜ ಅಖಂಡವಾಗಿಯೇ ಉಳಿಯಲಿದೆ’ ಎಂದು ಶ್ರೀಶೈಲ ಪೀಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.