ಬೆಂಗಳೂರು: ತಾವರೆಕೆರೆ ಸಮೀಪದ ಹಾಲುಬಾವಿಪಾಳ್ಯದ ಹತ್ತಿರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಎರಡು ವರ್ಷದ ಹೆಣ್ಣು ಚಿರತೆ ಮಂಗಳವಾರ ರಾತ್ರಿ ಸೆರೆ ಸಿಕ್ಕಿದೆ.
ಗುಲಗಂಜನಹಳ್ಳಿ, ಹಾಲುಬಾವಿಪಾಳ್ಯ ಪ್ರದೇಶದಲ್ಲಿ ಚಿರತೆಯ ಓಡಾಟವನ್ನು ಗಮನಿಸಿದ ಸ್ಥಳೀಯರು ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕಾಗಿ ಮಂಗಳವಾರ ಸಂಜೆ ಬೋನು ಇರಿಸಲಾಗಿತ್ತು. ನಾಯಿಯನ್ನು ತಿನ್ನಲು ಬಂದಾಗ ಚಿರತೆ ಸೆರೆ ಸಿಕ್ಕಿದೆ.
ಕಗ್ಗಲೀಪುರ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳು ಚಿರತೆಗೆ ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡಲಾಯಿತು. ಐದು ವರ್ಷಗಳಲ್ಲಿ ಸುಮಾರು 10 ಚಿರತೆಗಳನ್ನು ಈ ಭಾಗದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಸ್ಥಳೀಯರು ತಿಳಿಸಿದರು.