ಹೈದರಾಬಾದ್: ತೆಲುಗು ಚಿತ್ರರಂಗದ ಬೇರೂರಿರುವ ಕಾಸ್ಟಿಂಗ್ ಕೌಚ್ (ಲೈಂಗಿಕ ಕಿರುಕುಳ) ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಟಾಲಿವುಡ್ ನಟಿ ಶ್ರೀರೆಡ್ಡಿ ಅವರು ತೆಲುಗು ಫಿಲ್ಮ್ ಛೇಂಬರ್ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಮಾಧ್ಯಮಗಳ ಮುಂದೆಯೇ ಬಟ್ಟೆ ಕಳಚಿ ಅರೆನಗ್ನ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಚಿತ್ರರಂಗದ ಹಲವು ನಿರ್ಮಾಪಕರು, ನಿರ್ದೇಶಕರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಈ ಮೊದಲು ಆರೋಪಿಸಿದ್ದ ಅವರು, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.
ಶ್ರೀರೆಡ್ಡಿ ಜೊತೆ ವಾಣಿಜ್ಯ ಮಂಡಳಿಯ ಸದಸ್ಯರು ಮಾತುಕತೆಗೆ ಮುಂದಾದರೂ ಅವರು ಅದಕ್ಕೆ ಅವಕಾಶ ನೀಡಲಿಲ್ಲ.
‘ತಮ್ಮಂತೆ ಸಾಕಷ್ಟು ಮಂದಿಗೆ ಇಂತಹ ಕಹಿ ಅನುಭವಗಳಾಗಿವೆ. ಯುವತಿಯರಿಗೆ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದೆ. ಅವರ ಮಾತಿಗೆ ಒಪ್ಪಿಕೊಳ್ಳದಿದ್ದರೆ ಅವಕಾಶಗಳು ಸಿಗುವುದಿಲ್ಲ. ಕಲಾವಿದರ ಸಂಘದ ಸದಸ್ಯತ್ವ ನೀಡದಂತೆಯೂ ತಡೆಯಲಾಗುತ್ತಿದೆ. ನೋವು ವ್ಯಕ್ತಪಡಿಸಲು ಉಳಿದಿದ್ದ ದಾರಿ ಇದೊಂದೇ’ ಎಂದು ಅವರು ಹೇಳಿದ್ದಾರೆ.